ಶಿವಮೊಗ್ಗ: ಒಕ್ಕಲಿಗ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಭಗವಾನ್, ಒಕ್ಕಲಿಗರು ಹೀನ ಜಾತಿಯವರು, ನೀಚರು ಎಂದಿದ್ದಾರೆ. ತಮ್ಮ ವಾಕ್ಯಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಬಳಸಿಕೊಂಡು ಸಮರ್ಥನೆಯನ್ನೂ ನೀಡಿದ್ದಾರೆ. ಸಮಾಜದ ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಮನವಿ ಮೂಲಕ ದೂರಿದರು.
ಒಕ್ಕಲಿಗ ಸಮಾಜ ಸಾಕಷ್ಟು ಸಾಧನೆ ಮಾಡಿದೆ. ವಿವಿಧ ರಂಗಗಳಿಗೆ ಸಾಧಕರನ್ನು ಕೊಡುಗೆಯಾಗಿ ನೀಡಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರಿಂದ ಆರಂಭವಾಗಿ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಕೊಡುಗೆಗಳು ಶಾಶ್ವತವಾಗಿ ಉಳಿದಿವೆ. ಹೀಗಿರುವ ಸಂದರ್ಭದಲ್ಲಿ ಒಂದು ಸಮಾಜವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ರಘುರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ ಗೌಡ, ಪ್ರಮುಖರಾದ ತಾಯಿಮನೆ ಸುದರ್ಶನ್, ಸತೀಶ್, ರಮೇಶ್, ಡಾ.ಶಾಂತಾ ಸುರೇಂದ್ರ, ಮಮತಾ ಶಿವಣ್ಣ, ದೀಪಾ, ವಿಶಾಲಾಕ್ಷಿ ಇತರರಿದ್ದರು.