ನಾಗಮಂಗಲ: ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುಳಿವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೀಡಿದ್ದಾರೆ.
ತಾಲೂಕಿನ ದೇವಲಾಪುರ ಹೋಬಳಿ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಹಟ್ಟಮ್ಮ ದೇವಿಯ ನೂತನ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ಪಾಜಿಗೌಡ ಮನ್ಮುಲ್ ಅಧ್ಯಕ್ಷ ಸ್ಥಾನ ಕೊಡಿ ಎಂದು ಎಲ್ಲಿಯೂ ನಮ್ಮನ್ನು ಕೇಳಿಲ್ಲ, ನಾವು ಕೂಡ ಎಲ್ಲಿಯೂ ಘೋಷಣೆ ಮಾಡಿಲ್ಲ. ಆದರೆ, ಅವರು ನಮ್ಮ ಹಿತೈಷಿ. ಮೊದಲಿನಿಂದಲೂ ನಮ್ಮ ಜತೆಗಿದ್ದವರು. ಅವರು ಈಗ ನಮ್ಮ ಪಕ್ಷಕ್ಕೆ ಬರುವುದರಲ್ಲಿ ತಪ್ಪೇನಿಲ್ಲ ಎಂದರು.
ಜಿಲ್ಲೆಯ ಜನರಿಗೆ ಗೊತ್ತಿರುವ, ಜಿಲ್ಲೆಯವರೇ ಲೋಕಸಭೆಯಲ್ಲಿ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ನಿರ್ಣಯ. ಈ ಬಾರಿ ಜನತೆ ಕಾಂಗ್ರೆಸ್ ಸರ್ಕಾರದ ಕೈ ಹಿಡಿಯಲಿದ್ದಾರೆ. ಹೊರಗಿನವರಾದ ಗೋಪಾಲಯ್ಯ, ಅಶೋಕ್ ಈ ಹಿಂದೆ ಮಂತ್ರಿಯಾಗಿದ್ದು ನೆಂಟರ ರೀತಿ ಜಿಲ್ಲೆಗೆ ಬರುತ್ತಿದ್ದರು. ಹಾಗಾಗಿ ಜಿಲ್ಲೆಗೆ ಮಗನ ಅವಶ್ಯಕತೆಯಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷ ಅಂತಿಮವಾಗಿ ತೀರ್ಮಾನಿಸಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ತಾಲೂಕು ಹಂತದಲ್ಲಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ನಾಗಮಂಗಲದಲ್ಲಿ ತಾಯಿ-ಮಗು ಆಸ್ಪತ್ರೆಯನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡ ವೆಂಕಟರಮಣೇಗೌಡ (ಸ್ಟಾರ್ಚಂದ್ರು), ಸಂಪತ್ತು ಮತ್ತಿತರಿದ್ದರು.