ಗೋರಖ್ಪುರ: ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಹಲವು ಕಡೆಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ನಡೆಸುತ್ತಿರುವವರು ಪಾಕಿಸ್ತಾನದಂತೆ ವರ್ತಿಸುತ್ತಿದ್ದಾರೆ. ನೇರವಾಗಿ ಅಥವಾ ಪರೋಕ್ಷವಾಗಿ ಪಾಕ್ ಭಾಷೆಯನ್ನು ಮಾತನಾಡುತ್ತಿದ್ದಾರೆ. ಪ್ರತಿಭಟನೆಗಳ ಹೆಸರಿನಲ್ಲಿ ದೇಶಕ್ಕೆ ಮೋಸಮಾಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆಗಳನ್ನು ಹುಟ್ಟುಹಾಕುತ್ತಿವೆ. ಹೀಗೆ ಪ್ರತಿಭಟನೆ ಮಾಡುತ್ತಿರುವ ಅನೇಕರಿಗೆ ತಾವ್ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದೇ ಗೊತ್ತಿಲ್ಲ. ಇಂಡಿಯಾ ಗೇಟ್ ಬಳಿ ಕೆಲವು ಮಾಧ್ಯಮ ವರದಿಗಾರರು ಹೋಗಿ, ಪ್ರತಿಭಟನೆಗೆ ಕಾರಣವೇನು ಎಂದು ಪ್ರಶ್ನಿಸಿದಾಗ ಅವರಿಗೆ ಉತ್ತರ ಕೊಡಲೂ ಬರಲಿಲ್ಲ. ಸಿಎಎ ಎಂದರೆ ಏನು ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.
ಭಾರತದಲ್ಲಿ ಮುಸ್ಲಿಮರು ರಾಷ್ಟ್ರಪತಿ ಆಗುತ್ತಾರೆ. ಸುಪ್ರೀಂಕೋರ್ಟ್ ಜಡ್ಜ್ ಕೂಡ ಆಗುತ್ತಾರೆ. ಆದರೆ ಪಾಕಿಸ್ತಾನದಲ್ಲಿರುವ ಹಿಂದು, ಸಿಖ್, ಕ್ರಿಶ್ಚಿಯನ್ ಅಲ್ಪಸಂಖ್ಯಾತರು ದೇಶದ ಯಾವುದೇ ಮೇಲ್ದರ್ಜೆಯ ಹುದ್ದೆಗಳಿಗೆ ಏರುವುದಿಲ್ಲ ಎಂದು ಹೇಳುವ ಮೂಲಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮಲ್ಲಿನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತವೆ ಎಂಬುದನ್ನು ಹೋಲಿಕೆ ಮಾಡಿ ಹೇಳಿದರು. (ಏಜೆನ್ಸೀಸ್)