ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ವಿಚಾರದಲ್ಲಿ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತಿಲ್ಲ ಎಂದು ದೇವಾಲಯದ ಅರ್ಚಕ ವಿದ್ಯಾದಾಸ್ ಬಾಬಾ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಟ್ಟದ ವ್ಯಾಪ್ತಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೈಕೋರ್ಟ್ ಆದೇಶಿಸಿದ್ದು, ಮುಜರಾಯಿ ಇಲಾಖೆಯಿಂದಲೂ ಸಿಬ್ಬಂದಿಗೆ ಸೂಚನೆ ನೀಡಿದೆ. ಇತ್ತೀಚೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಭೇಟಿ ನೀಡಿದ ವೇಳೆ ಪೂಜೆಗೆ ಬೇರೆ ಅರ್ಚಕರನ್ನು ನಿಯೋಜಿಸಿ, ನನ್ನನ್ನು ಸ್ಥಳದಿಂದ ಹೊರಗೆ ಹಾಕಲಾಯಿತು. ಅಧಿಕಾರಿಗಳ ನಡೆ ಖಂಡಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಸಂಸ್ಕೃತ ಪಾಠಶಾಲೆ ಬಂದ್ ಆಗಿದ್ದು, ನ್ಯಾಯಾಲಯದ ಆದೇಶದಂತೆ ದೇವಾಲಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳ ದರ್ಬಾರ್ನಿಂದ ಭಕ್ತರಿಗೆ ಮೂಲ ಸೌಕರ್ಯ ದೊರೆಯುತ್ತಿಲ್ಲ ಎಂದು ದೂರಿದರು.