ಕುಶಾಲನಗರ:
ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಕಲೆಗಳಿಗೆ ರಾಜಯೋಗ ಸಿಗುತ್ತಿತ್ತು. ಕಲಾವಿದರಿಗೆ ಉತ್ತಮ ಸ್ಥಾನಮಾನದ ಅನುಕೂಲವೂ ಇತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕಲೆಗೆ ಇಂಥ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಅಭಿಪ್ರಾಯಪಟ್ಟರು. ಥಾಯ್ಲ್ಯಾಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಇಲ್ಲಿನ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳ ಮಾದರಿಯಲ್ಲಿ ಕಲೆಯನ್ನು ಬೆಳಗಿಸುವ ನಿರಂತರ ವೇದಿಕೆ ಮಕ್ಕಳಿಗೆ ಸಿಗಬೇಕು. ಮಕ್ಕಳಲ್ಲಿ ಪರಸ್ಪರ ಬೆರೆಯುವ ಮನೋಭಾವ ಬೆಳೆಸಬೇಕು. ಇದರಿಂದ ಅವರ ಜಗತ್ತು ವಿಸ್ತಾರ ಆಗುತ್ತದೆ. ಪ್ರಯೋಗಶೀಲತೆಗೆ ಅವಕಾದ ಕೊಡಬೇಕು. ಮಕ್ಕಳ ಮನಸ್ಸು ಅರಳಬೇಕಾದರೆ ಮನೆಯಲ್ಲೇ ಪ್ರಯೋಗಶೀಲತೆಗೆ ಅವಕಾಶ ಸಿಗಬೇಕು. ಕ್ರಿಯಾಶೀಲತೆ, ಪ್ರಯೋಗಶೀಲತೆ, ಅಧ್ಯಯನಶೀಲತೆಯಿಂದ ಮಕ್ಕಳಿಗೆ ಸೃಜನಶೀಲರಾಗುವ ವಾತಾವರಣ ನಿರ್ಮಾಣ ಆಗುತ್ತದೆ. ಸೃಜನಶೀಲತೆ ಮಕ್ಕಳ ಪ್ರಪಂಚವನ್ನು ವಿಸ್ತಾರ ಮಾಡುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ ಯಾವುದೇ ಕೆಲಸ ನಿರಂತರವಾಗಿ ಮಾಡುತ್ತಾ ಬಂದರೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿ ಸದೃಢರಾಗಿರುವವರು ಕಲೆಗೆ ಪ್ರೋತ್ಸಾಹ ಕೊಡುವಂತಾಗಬೇಕು. ಮಕ್ಕಲ್ಲಿ ಇರುವ ಪ್ರತಿಭೆಗೆ ಪ್ರೊತ್ಸಾಹ ಕೊಡುವ ಕೆಲಸ ಪೊಷಕರು ಮಾಡಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯೆ ಸುನಿತಾ, ಕಲಾವಿದ ಟಿ.ಆರ್. ಪ್ರಭುದೇವ್ ಮಾತನಾಡಿದರು. ಸಂಸ್ಥೆಯ ಸ್ಥಾಪಕರಾದ ಡಿಸೋಜಾ, ಅನೂಪ್ ಡಿಸೋಜಾ, ಏಂಜಲ್ ರಶ್ಮಿ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ನಂತರ ಥಾಯ್ಲ್ಯಾಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಕರನ್ನು ಅಭಿನಂದಿಸಲಾಯಿತು.