More

    ಎಎನ್‌ಎಫ್ ಗೆ ಬೇಕು ಮೂಲಸೌಕರ್ಯ – ಆಧುನಿಕ ತಂತ್ರಜ್ಞಾನ, ಪ್ರಬಲ ಶಸ್ತ್ರಾಸ್ತ್ರ ಹೊಂದಿರುವ ನಕ್ಸಲರು

    ಕಾಡಿನಲ್ಲಿ ದಿನ ಕಳೆಯುವ ನಕ್ಸಲರು ನಾಡಿನ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪೊಲೀಸ್ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಎ.ಕೆ. 47ನಂಥ ಪ್ರಬಲ ಶಸ್ತ್ರಾಸ್ತ್ರ ಹೊಂದಿದ್ದು, ದಾಳಿಗೆ ಮುಂದಾದರೆ ಅದನ್ನು ಎದುರಿಸುವ ಸಾಮರ್ಥ್ಯ ಕಾರ್ಯಾಚರಣೆ ತಂಡದ ಎಎನ್‌ಎಫ್ ಬಳಿಯಲ್ಲಿಲ್ಲ. ಸರ್ಕಾರ ನಕ್ಸಲ್ ನಿಗ್ರಹ ಪಡೆಗೆ ಬೇಕಾದ ಮೂಲಸೌಕರ್ಯ ಒದಗಿಸುವತ್ತ ಗಮನ ಹರಿಸಬೇಕಿದೆ.

    ನಕ್ಸಲರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವ ಸಂದರ್ಭ ಕಾಡಿನೊಳಗೆ ದಾರಿಗಾಗಿ ಜಿಪಿಎಸ್ ಉಪಕರಣಗಳನ್ನು ಬಳಸಿಕೊಳ್ಳುತ್ತಾರೆ. ಲ್ಯಾಪ್‌ಟಾಪ್, ಸ್ಯಾಟಲೈಟ್, ಸ್ಮಾರ್ಟ್ ಫೋನ್ ಸೇರಿ ಅತ್ಯಾಧುನಿಕ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾರೆ. ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚಾರ್ಜ್ ಖಾಲಿಯಾಗುತ್ತಿದ್ದಂತೆ ಅರಣ್ಯದ ಅಂಚಿನ ಮನೆಗಳನ್ನು ಸಂಪರ್ಕಿಸಲಾಗುತ್ತದೆ. ಈ ನಿಟ್ಟಿನಲ್ಲೇ ಸುಬ್ರಹ್ಮಣ್ಯದ ಐನೆಕಿದು ಭಾಗದ ಮನೆಗೆ ಆಗಮಿಸಿದ್ದಾರೆ ಎಂಬುದು ಎಎನ್‌ಎಫ್ ಅಽಕಾರಿಗಳ ಮಾತು.

    ಇದಕ್ಕೆ ಪುಷ್ಠಿ ನೀಡುವಂತೆ ಕೆಲವು ಸಮಯದ ಹಿಂದೆ ಮಡಿಕೇರಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದು, ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಗಡಿ ಭಾಗದ ಅರಣ್ಯ ಪ್ರದೇಶದಲ್ಲೂ ಸ್ಯಾಟಲೈಟ್ ಫೋನ್ ಕಾರ್ಯನಿರ್ವಹಿಸಿದ ಬಗ್ಗೆ ಮಾಹಿತಿ ಬಹಿರಂಗಗೊಂಡಿತ್ತು. ಇಲ್ಲಿ ನಡೆದ ಕಾರ್ಯಾಚರಣೆಯನ್ನು ಗುಪ್ತವಾಗಿ ಇಡಲಾಗಿತ್ತು. ಆ ಸಂದರ್ಭ ಉಗ್ರಗಾಮಿ ಚಟುವಟಿಕೆ ಎಂದು ಬಿಂಬಿಸಲಾಗಿತ್ತಾದರೂ ಸದ್ಯದ ಬೆಳವಣಿಗೆಗಳು ನಕ್ಸಲ್ ಚಟುವಟಿಕೆಯ ಅಂಗ ಎಂಬುದಕ್ಕೆ ಪುಷ್ಠಿ ನೀಡುತ್ತದೆ.

    ನಕ್ಸಲರನ್ನು ಹೊರಜಗತ್ತಿನಲ್ಲಿ ನಿಯೋಜಿಸಲ್ಪಟ್ಟವರು ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡುವ ಮೂಲಕ ನಿಯಂತ್ರಿಸುತ್ತಾರೆ. ಇದರಿಂದ ಅಽಕಾರಿಗಳ ಚಲನವಲವನ್ನು ಅವರಿಗೆ ಮಾಹಿತಿ ನೀಡುವ ಮೂಲಕ ಕೂಂಬಿಂಗ್ ಕಾರ್ಯಾಚರಣೆಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾಡಿನಂಚಿನಲ್ಲಿರುವ ಮನೆಯವರಿಗೆ ಈಗಲೂ ನಕ್ಸಲರ ಬಗ್ಗೆ ಅನುಕಂಪ ಇದ್ದು, ಅವರು ಬಡವರ ಪರವಾಗಿ ಹೋರಾಟ ನಡೆಸುವುದರಲ್ಲಿ ತಪ್ಪೇನಿದೆ. ಕಾಡಿನ ಒಳಗಿರುವವರಿಗಿಂತಲೂ ಹೊರಗಿರುವವರು ಅಪಾಯಕಾರಿಯಾಗಿದ್ದಾರೆ ಎಂಬ ಅಭಿಪ್ರಾಯವಿದೆ.

    ಸಿಬ್ಬಂದಿ ಕಷ್ಟ ಕೇಳುವವರಿಲ್ಲ:
    ನಕ್ಸಲರ ಚಲನವಲನ ಪ್ರಕಟವಾದ ಬಳಿಕ ಹಿರಿಯ ಅಽಕಾರಿಗಳು ನೀಡುವ ಸೂಚನೆ ಪ್ರಕಾರ ಕೂಂಬಿಂಗ್ ಕಾರ್ಯಾಚರಣೆ ೨ರಿಂದ ೩ ದಿನ ನಿರಂತರವಾಗಿ ನಡೆಯುತ್ತದೆ. ಈ ಸಂದರ್ಭ ಒಂದು ದಿನಕ್ಕೆ ಬೇಕಾದ ಆಹಾರವನ್ನು ಬೇಸ್ ಕ್ಯಾಂಪ್‌ನಲ್ಲಿ ತಯಾರಿಸಿ ನೀಡಲಾಗುತ್ತದೆಯಾದರೂ ಆ ಬಳಿಕದ ಆಹಾರವನ್ನು ಕಾಡಿನ ಒಳಗೇ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ನೀರು ಹಾಗೂ ಆಹಾರ ತಯಾರಿಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ಶಸ್ತ್ರಾಸ್ತ್ರಗಳ ಜತೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.

    ಬೇಕಿದೆ ಆಧುನಿಕ ವ್ಯವಸ್ಥೆ:
    ಕೂಂಬಿಂಗ್ ನಡೆಸುವ ನಕ್ಸಲ್ ನಿಗ್ರಹಪಡೆ ಸಿಬ್ಬಂದಿ ಬಳಿಯಲ್ಲಿರುವುದು ಕೇವಲ ಒಂದು ಬುಲೆಟ್‌ಪ್ರೂಫ್ ಜಾಕೆಟ್ ಹಾಗೂ ಶಿರಸ್ತ್ರಾಣ. ಆದರೆ ವಿಕ್ರಂ ಗೌಡನಂಥ ಮೋಸ್ಟ್ ವಾಂಟೆಂಡ್ ನಕ್ಸಲ್ ಬಳಿ ಎ.ಕೆ. ೪೭ನಂತಹ ಆಧುನಿಕ ಆಯುಧಗಳಿವೆ. ಅದನ್ನು ಎದುರಿಸುವಷ್ಟು ಸಾಮರ್ಥ್ಯ ಇಲಾಖೆಯಲ್ಲಿಲ್ಲ. ಕೂಂಬಿಂಗ್ ನಡೆಸುವ ಸಿಬ್ಬಂದಿಗೆ ಆಧುನಿಕ ವ್ಯವಸ್ಥೆ ಒದಗಿಸಿಕೊಡಬೇಕಾಗಿದೆ.

    ಚುನಾವಣೆ ಬಂದಾಗ ಪ್ರತ್ಯಕ್ಷ
    ಚುನಾವಣೆ ಸಮಯದಲ್ಲಿ ಪೊಲೀಸರು ಸೇರಿ ಅಽಕಾರಿ ವರ್ಗದವರು ಚುನಾವಣಾ ಕರ್ತವ್ಯಕ್ಕೆ ಹೆಚ್ಚಿನ ಗಮನ ನೀಡುವ ಸಂದರ್ಭ ನಕ್ಸಲರು ತಮ್ಮ ಇರುವಿಕೆಯನ್ನು ಪ್ರಕಟಿಸುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ೨೦೧೮ರಲ್ಲಿ ಕಾರ್ಕಳದ ಕೆಲವು ಭಾಗದಲ್ಲಿ ತಮ್ಮ ಇರುವಿಕೆ ತೋರ್ಪಡಿಸಿದ್ದರು. ಈಗ ಮತ್ತೆ ಚುನಾವಣೆ ಬಂದಿದ್ದು, ಸುಬ್ರಹ್ಮಣ್ಯ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಮತ ಕೇಂದ್ರಗಳ ಮೇಲೆ ದಾಳಿ ನಡೆಸಿ, ಅಲ್ಲಿನ ಉಪಕರಣವನ್ನು ಅಪಹರಣ ಮಾಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದು ನಕ್ಸಲರ ಮೂಲ ಉದ್ದೇಶವಾಗಿದೆ.

    ದರೋಡೆ ಮಾಡಿದ್ದೇ ಶಸ್ತ್ರಾಸ್ತ್ರ!
    ಮನೆ ಮಂದಿ ಹೇಳುವ ಪ್ರಕಾರ ಎರಡು ಸ್ಥಳೀಯವಾಗಿ ಬಳಸುವ ಕೋವಿಗಳಾಗಿದ್ದರೆ, ಇನ್ನೆರಡು ಸಣ್ಣ ಗಾತ್ರದ ಆಧುನಿಕ ಶಸ್ತ್ರಾಸ್ತ್ರ ಇದ್ದವು. ಉತ್ತರ ಭಾರತದಲ್ಲಿ ನಕ್ಸಲರು ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ದರೋಡೆ ಮಾಡುತ್ತಾರೆ. ಕೆಲವು ಭಾಗದಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರಿಂದ ಖರೀದಿಸಿ ಸಂಗ್ರಹಿಸುತ್ತಾರೆ. ಆ ಬಳಿಕ ತಮ್ಮ ತಂಡಗಳಿಗೆ ಹಂಚುವ ಕಾರ್ಯ ಮಾಡುತ್ತಾರೆ. ಅಗತ್ಯ ಸಂದರ್ಭ ನಕ್ಸಲರು ಇದನ್ನೇ ತಮ್ಮ ಆಯುಧವಾಗಿ ಬಳಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts