ಕುಣಿಗಲ್: ಗಂಡನ ಕೊಲೆಗೆ ಸುಪಾರಿ ನೀಡಿದ ಹೆಂಡತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ ಕುಣಿಗಲ್ ಪೊಲೀಸರ ಕಾರ್ಯದಕ್ಷತೆ ಮೆಚ್ಚಿ ಗ್ರಾಮಸ್ಥರು ಬುಧವಾರ ಪೊಲೀಸರನ್ನು ಪಟ್ಟಣ ಠಾಣೆಯಲ್ಲಿ ಸನ್ಮಾನಿಸಿದರು.
ಸೀನಪ್ಪನಹಳ್ಳಿಯ ಮಂಜುನಾಥ್ ಅಂಬಾತನನ್ನು ಫೆ.3ರಂದು ಆತನ ಪತ್ನಿ ಹರ್ಷಿತಾ ತನ್ನ ಸಹಚರರಾದ ರಘು, ರವಿಕಿರಣ್, ಅರುಣ್, ಕೇಶವ, ನಟರಾಜು, ಶ್ರೀಧರ್, ಉಮೇಶ್ ಸೇರಿಕೊಂಡು ಬರ್ಬರವಾಗಿ ಹತ್ಯೆಗೈದು ಯಾರಿಗೂ ಅನುಮಾನ ಬರಬಾರದೆಂದು ಶವ ಹಾಗೂ ಬೈಕ್ ಅನ್ನು ಕೆರೆಯಲ್ಲಿ ಎಸೆದಿದ್ದರು, ಕುಣಿಗಲ್ ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದರು.
ಹೀಗಾಗಿ ಸೀನಪ್ಪನಹಳ್ಳಿ, ಹೊಸಕೆರೆ ಮೊದಲಾದ ಊರಿನ ಗ್ರಾಮಸ್ಥರು ಕುಣಿಗಲ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಡಿವೈಎಸ್ಪಿ ಲಕ್ಷ್ಮಿಕಾಂತ್, ಸಿಪಿಐಗಳಾದ ಗುರುಪ್ರಸಾದ್, ಅರುಣ್ಸಾಲಂಕಿ, ಪಿಎಸ್ಐ ಜಮಲ್ಅಹಮದ್ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.
ಅನಾಥ ಶವಗಳ ಶವ ಸಂಸ್ಕಾರಕ್ಕೆ ನೆರವಾಗುವ ಅಂಬುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯರಾದ ಬಿಳಿಲಿಂಗೇಗೌಡ, ಮಾಜಿ ಸದಸ್ಯ ಬೈರಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ಬೋರೇಗೌಡ, ಮಂಜುನಾಥ್ ಅವರ ಅಕ್ಕ ವಿದ್ಯಾಶ್ರೀ, ವಿಂದ್ಯಾಶ್ರೀ, ಗ್ರಾಮಸ್ಥರಾದ ಶಂಕರ್, ಬೈರಪ್ಪ ಮತ್ತಿತರರು ಇದ್ದರು.
ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರ ಅತ್ಯಮೂಲ್ಯವಾಗಿದೆ. ಇದರ ಶ್ರೇಯಸ್ಸು ಪೊಲೀಸ್ ಸಿಬ್ಬಂದಿಗೆ ಸಲ್ಲಬೇಕಾಗಿದೆ. ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಯೇ ಹೀರೋಗಳು.ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಲಿದ್ದಾರೆ,
| ರಾಹುಲ್ಕುಮಾರ್ ಎಸ್ಪಿ