ಹಿರೇಕೆರೂರ: ವಿಶ್ವ ಆಹಾರ ದಿನವನ್ನು ಹಸಿವಿನ ದಿನವಾಗಿ ಆಚರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ನಂತರ ಶಿರಸ್ತೇದಾರ ಜೆಡ್.ಎ. ಹೊಸಳ್ಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಯೂನಿಯನ್ ತಾಲೂಕು ಘಟಕದ ಅಧ್ಯಕ್ಷ ಶೇಖಪ್ಪ ಶಿವನಕ್ಕನವರ ಮಾತನಾಡಿ, ಭಾರತ ದೇಶದಲ್ಲಿ 20 ಕೋಟಗಿಂತ ಹೆಚ್ಚಿನ ಜನರು ಊಟವಿಲ್ಲದೆ ಹಸಿವಿನಿಂದ ಜೀವನ ಸಾಗಿಸುತ್ತಿದ್ದಾರೆ. ವಿಶ್ವ ಆಹಾರ ದಿನವನ್ನು ವಿಶ್ವ ಹಸಿವಿನ ದಿನ ಎಂದು ಆಚರಿಸಬೇಕು. 60 ವರ್ಷ ಪೂರೈಸಿದ ಪ್ರತಿಯೊಬ್ಬ ವ್ಯಕ್ತಿಗೂ ವೃದ್ಧಾಪ್ಯ ಪಿಂಚಣಿ ಮತ್ತು ನಿವೃತ್ತಿ ವೇತನ ನೀಡಬೇಕು. ಕಾರ್ಮಿಕರಿಗೆ ಉಚಿತವಾಗಿ ಉತ್ತಮ ಮನೆ ನಿರ್ಮಿಸಿ ಕೊಡಬೇಕು. ಕೃಷಿ ಕಾರ್ಮಿಕರ ಸಹಜ ಸಾವು ಮತ್ತು ಆಕಸ್ಮಿಕ ಸಾವಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಇಎಸ್ಐ ಯೋಜನೆಯಡಿ ಪ್ರತಿಯೊಬ್ಬ ಕೃಷಿ ಕಾರ್ಮಿಕರು ಹೆಸರನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಕಾಮಾಕ್ಷಿ ರೇವಣಕರ್, ಕುಮಾರ ಸುಳ್ಳಣ್ಣನವರ, ಚನ್ನಬಸಯ್ಯ ಹಿರೇಮಠ, ಬಸವಣ್ಣೆಮ್ಮ ಚಲವಾದಿ, ಶ್ವೇತಾ ಚನ್ನಗೌಡ್ರ, ನಾಗರಾಜ ಮಳೂರ, ನವೀನ ಹುಲ್ಲತ್ತಿ, ಮಾಲತೇಶ ಕುಸಗೂರ ಹಾಗೂ ಕೃಷಿ ಕಾರ್ಮಿಕರು ಇದ್ದರು.