ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಡಾಲಿ ಧನಂಜಯ ನಾಯಕನಾಗಿರುವ, ರೋಹಿತ್ ಪದಕಿ ಆ್ಯಕ್ಷನ್&ಕಟ್ ಹೇಳುತ್ತಿರುವ ಚಿತ್ರ “ಉತ್ತರಕಾಂಡ’. ಉತ್ತರ ಕರ್ನಾಟಕ ಸೊಗಡಿನ ಈ ಚಿತ್ರಕ್ಕಾಗಿ ಕೆಲ ದಿನಗಳಿಂದ ಆಡಿಷನ್ ನಡೆಯುತ್ತಿದೆ. ಮತ್ತೊಂದೆಡೆ ಈ ಚಿತ್ರದ ಮೂಲಕ ನಾಯಕಿಯಾಗಿ ಕಮ್ಬ್ಯಾಕ್ ಮಾಡಬೇಕಿದ್ದ ನಟಿ ರಮ್ಯಾ ಕೆಲ ದಿನಗಳ ಹಿಂದಷ್ಟೇ ಚಿತ್ರದಿಂದ ಹೊರನಡೆದಿರುವುದಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ “ಉತ್ತರಕಾಂಡ’ ತಂಡಕ್ಕೆ ಹೊಸ ಪ್ರತಿಭೆಯ ಎಂಟ್ರಿಯಾಗಿದೆ. ಹಾಗಂತ ನಾಯಕಿಯ ಪಾತ್ರಕ್ಕಲ್ಲ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದ್ದು, ಅದರ ನಡುವೆಯೇ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರತಂಡ ಸೇರಿಕೊಂಡಿದ್ದಾರೆ.
ಹಿಂದಿಯಲ್ಲಿ “ದೇವ್ ಡಿ’, “ಕ್ವೀನ್’, “ವೇಕ್ ಅಪ್ ಸಿಡ್’, “ಇಂಗ್ಲಿಷ್ ವಿಂಗ್ಲಿಷ್’, “ಕಾಯ್ ಪೋ ಚೇ’, “ಉಡ್ತಾ ಪಂಜಾಬ್’, “ಅಂಧಾದುನ್’, ತೆಲುಗಿನ “ಸೈರಾ ನರಸಿಂಹ ರೆಡ್ಡಿ’ ಸೇರಿ ಮಲಯಾಳಂ ಚಿತ್ರಗಳಿಗೂ ಸಂಗೀತ ನೀಡಿರುವ ಖ್ಯಾತಿ ಅಮಿತ್ಗೆ ಸಲ್ಲುತ್ತದೆ. ಇದೀಗ “ಉತ್ತರಕಾಂಡ’ ಚಿತ್ರಕ್ಕೆ ಅವರು ಸಂಗೀತ ನೀಡಲಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ರೋಹಿತ್ ಪದಕಿ, “ಚಿತ್ರದಲ್ಲಿ ನಾವು ಉತ್ತರ ಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆ ಹೇಳಲಿದ್ದೇವೆ. ಇಂತಹ ಸ್ಥಳಿಯ ಭಾವನೆಗಳ ಕಥೆಗೆ ಅಮಿತ್ ಸಂಗೀತ ಮೆರುಗು ನೀಡಲಿದೆ’ ಎಂದು ಹೇಳೀಕೊಂಡರು.
ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ, “ಈ ಚಿತ್ರದ ಕಥಾವಸ್ತು ಮತ್ತು ಭಾವನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. “ಉತ್ತರಕಾಂಡ’ದಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ. ಇದೊಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದೇ ತಿಂಗಳ 15ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.