ರಾಯಬಾಗ: ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಪುತ್ರ ಅಮಿತ್ ಕೋರೆ ಅವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕೆಂದು ಜಲಾಲಪುರ ಗ್ರಾಮದ ಬಿಜೆಪಿ ಮುಖಂಡರು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಧುರೀಣ ಬಸು ಅವ್ವನ್ನವರ, ಅಮಿತ್ ಕೋರೆ ಅವರು 25 ವರ್ಷಗಳಿಂದ ಸಹಕಾರ, ಶಿಕ್ಷಣ ಮತ್ತು ಕೈಗಾರಿಕೋದ್ಯಮದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಗಡಿಭಾಗದ ರಾಯಬಾಗ ಮತ್ತು ಚಿಕ್ಕೋಡಿ ಭಾಗದಲ್ಲಿ ಒಂದು ಖಾಸಗಿ ಹಾಗೂ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಅಮಿತ್ ಅವರು ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದರು. ಬಿಜೆಪಿ ಮುಖಂಡ ರಾಜು ಜಾಧವ ಮಾತನಾಡಿ, ಅಮಿತ್ ಕೋರೆ ಅವರಂಥ ಯುವ ಉತ್ಸಾಹಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕೆಂದು ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು, ಮುಖಂಡರಿಗೆ ಒತ್ತಾಯಿಸಿದರು. ಸದಾಶಿವ ಜಾಗದಾಳೆ, ಪ್ರಭಾಕರ ಹವಾಲ್ದಾರ, ಸಂಜು ಜಾಧವ, ವಿನಾಯಕ ಪವಾರ, ಪಾಂಡು ಹವಾಲ್ದಾರ, ಕಿರಣ ಖಣದಾಳೆ, ತಾನಾಜಿ ಮಾಂಜರೆ, ಬಸು ಬೆಳಸೆ, ಸಿದ್ದು ಚೌಗಲೆ, ವಿನಾಯಕ ಪವಾರ, ಮಂಜು ಚೌಗಲೆ ಇತರರು ಇದ್ದರು.