ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್ಆರ್(ಸಾಮಾಜಿಕ ಜವಾಬ್ದಾರಿ ನಿಧಿ) ಅನುದಾನದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ 20 ಲಕ್ಷ ರೂ. ಮೌಲ್ಯದ ಒಂದು ಸುಸಜ್ಜಿತ ಆಂಬುಲೆನ್ಸ್ ಕೊಡುಗೆಯಾಗಿ ನೀಡಿತು.
ಬ್ಯಾಂಕ್ನ ಪ್ರಧಾನ ಕಚೇರಿ ಮುಂಭಾಗ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಆಂಬುಲೆನ್ಸ್ ಕೀಯನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರಿಗೆ ಹಸ್ತಾಂತರಿಸಿದರು.
ಕರೊನಾ ಸಂಕಷ್ಟ ಎದುರಿಸುತ್ತಿರುವ ಈ ಸಂದಿಗ್ಧ ಕಾಲದಲ್ಲಿ ಬ್ಯಾಂಕ್ನ ಈ ಕೊಡುಗೆ ಅತ್ಯಂತ ಶ್ಲಾಘನೀಯ. ಇದು ಸಾಂಕ್ರಾಮಿಕದೊಂದಿಗಿನ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ. ಈ ಕೊಡುಗೆ ಬ್ಯಾಂಕ್ನ ಸಾಮಾಜಿಕ ಕಳಕಳಿಯ ದ್ಯೋತಕ ಎಂದು ಜಿಲ್ಲಾಧಿಕಾರಿ ಅಭಿನಂದಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ಬ್ಯಾಂಕ್ನ ಚೀಫ್ ಬಿಜಿನೆಸ್ ಆಫೀಸರ್ ಗೋಕುಲದಾಸ ಪೈ, ಜನರಲ್ ಮ್ಯಾನೇಜರ್ ಮಂಜುನಾಥ ಭಟ್ ಬಿ.ಕೆ., ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಶ್ರೀನಿವಾಸ ದೇಶಪಾಂಡೆ ಇದ್ದರು.
ಆಂಬುಲೆನ್ಸ್ ವಿಶೇಷತೆ
ಸರ್ವ ಸುಸಜ್ಜಿತವಾದ ಆಂಬುಲೆನ್ಸ್ ಇದಾಗಿದ್ದು, ಎಮರ್ಜೆನ್ಸಿ ಮೆಡಿಕಲ್ ಪರಿಕರಗಳು, ಜಂಬೋ ಸೈಜಿನ ಆಕ್ಸಿಜನ್ ಸಿಲಿಂಡರ್ ಇತ್ಯಾದಿ ಅಗತ್ಯ ಜೀವರಕ್ಷಕ ಉಪಕರಣಗಳು ಇರುವುದಲ್ಲದೆ, ಚಾಲಕನ ಕ್ಯಾಬಿನ್ ಹಾಗೂ ರೋಗಿಗಳನ್ನು ಸಾಗಿಸುವ ಭಾಗ ಸಂಪೂರ್ಣ ಏರ್ಟೈಟ್ ಕ್ಯಾಬಿನ್ಗಳಾಗಿವೆ. ಅವೆರಡರ ಮಧ್ಯೆ ಸಂಪರ್ಕರಹಿತ ಸುರಕ್ಷತೆ ಕಲ್ಪಿಸಲಾಗಿದೆ. ಜಿಲ್ಲಾಡಳಿತಕ್ಕೆ ಕರ್ಣಾಟಕ ಬ್ಯಾಂಕ್ ಈಗಾಗಲೆ ಸುಮಾರು 15,39,700 ರೂ. ಮೌಲ್ಯದ ಕೊಡುಗೆ ನೀಡಿದೆ. ಸಮಾಜದ ಭಾಗವಾಗಿ ಇಂತಹ ಕಾರ್ಯಗಳನ್ನು ಮಾಡುವುದು ಕರ್ಣಾಟಕ ಬ್ಯಾಂಕ್ಗೆ ಹೆಮ್ಮೆಯ ವಿಷಯ ಎಂದು ಮಹಾಬಲೇಶ್ವರ ಎಂ.ಎಸ್. ಹೇಳಿದರು. ಕೋವಿಡ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಬ್ಯಾಂಕ್ ಜಿಲ್ಲಾಡಳಿತಕ್ಕೆ ಅಗತ್ಯವಾಗಿದ್ದ ಡಿಜಿಟಲ್ ಆಕ್ಸಿಮೀಟರ್, ಫೇಸ್ ಮಾಸ್ಕ್ ಹಾಗೂ ಒಂದು ಸಾವಿರ ಪಿಪಿಇ ಕಿಟ್ಗಳನ್ನು ನೀಡಿದೆ. ಇದಲ್ಲದೆ 5 ಲಕ್ಷ ರೂ. ನೆರವನ್ನು ಮಂಡ್ಯ ಜಿಲ್ಲಾಡಳಿತಕ್ಕೂ ನೀಡಿದೆ. ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲಾಡಳಿತಗಳಿಗೆ ತಲಾ ಒಂದು ಸಾವಿರದಂತೆ 10,50,000 ರೂ. ಮೌಲ್ಯದ 3000 ಪಿಪಿಇ ಕಿಟ್ಗಳನ್ನು ನೀಡುವುದರ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಂತಿದೆ ಎಂದರು.