ಬ್ಯಾಡಗಿ: ವಿಶ್ವದಲ್ಲಿ ಅತಿದೊಡ್ಡ ಪ್ರಭಾಪ್ರಭುತ್ವದ ದೇಶದಲ್ಲಿ ಎಲ್ಲರೂ ಒಪ್ಪುವ ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಕೊಡುಗೆಯನ್ನು ಪ್ರತಿಯೊಬ್ಬ ಪ್ರಜೆಯೂ ಸ್ಮರಿಸಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಕೆ. ದೊಡ್ಡಬಸವರಾಜ ಹೇಳಿದರು.
ಪಟ್ಟಣದ ವರ್ತಕರ ಕಲಾ ಮತ್ತು ಮಹಾವಿದ್ಯಾಲಯದಲ್ಲಿ ಭಾನುವಾರ ಸಂವಿಧಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ತಾಲೂಕಿನ ಗುಂಡೇನಹಳ್ಳಿಯಿಂದ ಆರಂಭವಾದ ಸಂವಿಧಾನ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮ ಫೆ. 2ರಂದು ತಾಲೂಕಿನ ಘಾಳಪೂಜಿ ಗ್ರಾಮ ಪಂಚಾಯಿತಿಯಲ್ಲಿ ಕೊನೆಗೊಳ್ಳಲಿದೆ. ಸಂವಿಧಾನ ಜಾಗೃತಿ ಜಾಥಾ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂವಿಧಾನ ಕುರಿತು ಅರಿವು, ಜಾಗೃತಿ ಮೂಡಿಸಿ, ಜನಸಾಮಾನ್ಯರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಹಾಗೂ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸುಭಾಸ ಮಾಳಗಿ ಮಾತನಾಡಿ, ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕೊಟ್ಟ ವಿಶೇಷ ಕೊಡುಗೆಯಾಗಿದೆ ಎಂದರು.
ಸಂವಿಧಾನ ಕುರಿತು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಮಾಡಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ತಹಸೀಲ್ದಾರ್ ಫಿರೋಜ್ಷಾ ಸೋಮನಕಟ್ಟಿ, ಶಿಶುಯೋಜನಾಧಿಕಾರಿ ವೈ.ಟಿ.ಪೂಜಾರ, ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿ ಸಿ.ಬಿ. ಪ್ರಸಾದಿಮಠ, ಪುರಸಭೆ ಸದಸ್ಯರಾದ ಫಕೀರಮ್ಮ ಚಲವಾದಿ, ಹನುಮಂತಪ್ಪ ಮ್ಯಾಗೇರಿ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ರವಿ ಹುಣಸಿಮರದ, ಇತರರಿದ್ದರು.