ದೇವದುರ್ಗ: ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ದಲಿತರು ಪಾಲಿಗೆ ಅಂಬೇಡ್ಕರ್ ಆಶಾಕಿರಣವಾಗಿದ್ದು, ಮೀಸಲಾತಿ ನೀಡುವ ಮೂಲಕ ಶೋಷಿತರ ಮನೆ ಬೆಳಗಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಜ ಅಕ್ಕರಕಿ ಹೇಳಿದರು.
ಇದನ್ನೂ ಓದಿ: ದಲಿತ ಸಮುದಾಯಗಳಿಗೆ ಅಂಬೇಡ್ಕರ್ ದೇವರು: ವಿಠ್ಠಲ್ ವಗ್ಗನ್
ತಾಲೂಕಿನ ಕೊಪ್ಪರ ಗ್ರಾಮದ ಬಹುಜನ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಮನೆ-ಮನೆಗೆ ಅಂಬೇಡ್ಕರ್ 70ನೇ ಸರಣಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅನ್ನು ಕೇವಲ ತೋರಿಕೆಗೆ ನೆನಪಿಸಿಕೊಳ್ಳದೆ ಅವರ ಆಶಯಗಳನ್ನು ಮನಸ್ಸಿನಲ್ಲಿ ಇಳಿಸಿಕೊಂಡು, ಅವಕಾಶ ಮತ್ತು ಸೌಲಭ್ಯಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದರು.
ಹೋರಾಟಗಾರ ರಮೇಶ ರಾಮನಾಳ ಮಾತನಾಡಿ, ಯುವಕರು ಅಂಬೇಡ್ಕರ್ ಅನ್ನು ಮಾದರಿಯಾಗಿ ಇಟ್ಟುಕೊಂಡು, ಓದಿ ಉನ್ನತ ಶಿಕ್ಷಣ ಪಡೆದು ಆದರ್ಶ ಬದುಕು ರೂಪಸಿಕೊಳ್ಳಬೇಕು. ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಹೀಗಾಗಿ ಪ್ರತಿಯೊಬ್ಬರು ಮಕ್ಕಳಿಗೆ ತಪ್ಪದೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಕಾರ್ಯಾಧ್ಯಕ್ಷ ಅರ್ಜುನ ಕೊಪ್ಪರ, ಪ್ರಗತಿಪರ ಚಿಂತಕ ಸಿದ್ದರಾಮ ಕೊಪ್ಪರ, ಹನುಮಂತ, ಶಿವರಾಜ್, ಗಂಗಪ್ಪ ಕೊಪ್ಪರ, ಮಲ್ಲಿಕಾರ್ಜುನ, ಚನ್ನಪ್ಪ ಚಿಕ್ಕಬೂದೂರು, ವಿಶ್ವನಾಥ, ಬಸವರಾಜ ಆಲ್ದರ್ತಿ ಇದ್ದರು.