ಮೈಸೂರು: ಚಂಡೀಗಡ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 8 ರಿಂದ 12 ರವರೆಗೆ ನಡೆಯಲಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಭಾರ ಎತ್ತುವ ಮತ್ತು ದೇಹದಾರ್ಢ್ಯ ಕ್ರೀಡಾಕೂಟಕ್ಕೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪಿಜಿಎಸ್ಇ ಮಾನಸಗಂಗೋತ್ರಿಯ ದಯಾನಂದ, ದೀಲಿಪ್, ಸೋಮಾನಿ ಕಾಲೇಜಿನ ಅಕ್ಷಯ್, ಶೇಷಾದ್ರಿಪುರಂ ಕಾಲೇಜಿನ ಪೂರ್ಣಚಂದ್ರ ಆಯ್ಕೆಯಾಗಿದ್ದಾರೆ. ತರಬೇತುದಾರ ಎಸ್.ವಿ.ಕಾರ್ತಿಕ್, ವ್ಯವಸ್ಥಾಪಕ ಶಶಿಕುಮಾರ್ ಜತೆ ತಮ್ಮ ತಂಡ ಚಂಡೀಗಡ್ ವಿವಿಗೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹ್ಯಾಂಡ್ಬಾಲ್ನಲ್ಲಿ ಮೈಸೂರು ವಿವಿ ತಂಡಕ್ಕೆ ಕಂಚು
2021-22ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಕಂಚಿನ ಪದಕಗಳಿಸಿ ಸಾಧನೆ ಮಾಡಿದೆ.
ತಿರುಚನಾಪಳ್ಳಿಯ ಭಾರತೀದಾಸನ್ ವಿಶ್ವವಿದ್ಯಾಲಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಹರಿಯಾಣ ಚೌಧರಿ ರಣವೀರ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಮಾ.17 ರಿಂದ 21 ರವರೆಗೆ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವ ವಿಶ್ವವಿದ್ಯಾಲಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.