ಉಡುಪಿ: ಮಣಿಪಾಲದ ಡಿ.ಸಿ. ಆಫೀಸ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳ ರಂಪಾಟ ಎಲ್ಲೆಮೀರಿತ್ತು. ನಿನ್ನೆ ತಡರಾತ್ರಿ ಹೊರ ರಾಜ್ಯದ ಯುವತಿ ಕಂಠಪೂರ್ತಿ ಮದ್ಯ ಸೇವಿಸಿ ಪಿಜ್ಜಾ ಶಾಪ್ಗೆ ಯುವಕನೊಬ್ಬನ ಜತೆ ಬಂದು ಗಲಾಟೆ ಮಾಡಿದ್ದಾಳೆ. ಶಾಪ್ ಸಿಬ್ಬಂದಿ ಹರಸಾಹಸ ಮಾಡಿ ಇಬ್ಬರನ್ನೂ ಹೊರಗೆ ಕಳುಹಿಸಿದ್ದಾರೆ.
ಹೊರಬಂದ ಯುವತಿಗೆ ಕಿಕ್ ಹೆಚ್ಚಾಗಿ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಅಷ್ಟಕ್ಕೂ ಸಮಾಧಾನಗೊಳ್ಳದ ಯುವತಿ ಸಾರ್ವಜನಿಕರೊಂದಿಗೂ ಕಿರಿಕ್ ಮಾಡಿಕೊಂಡಿದ್ದಾಳೆ. ಕಡೆಗೆ, ಸಾರ್ವಜನಿಕರು ಯುವತಿಯ ತಲೆಗೆ ತಣ್ಣೀರು ಸುರಿದು ನಶೆ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ತಣ್ಣೀರಿನ ಪ್ರಭಾವ ಬಹುಶಃ ಬೇರೆಯದೇ ರೂಪ ಪಡೆದುಕೊಂಡಿರಬಹುದು..! ಅದರ ಪರಿಣಾಮ, ಯುವತಿ ಸಾರ್ವಜನಿಕರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾಳೆ.
ನಿಲ್ಲಲೂ ತ್ರಾಣವಿಲ್ಲದ ಯುವತಿ ಪದೇ ಪದೇ ಬೀಳುತ್ತಿದ್ದಳು. ಕಡೆಗೆ ಜತೆಯಲ್ಲಿದ್ದ ಯುವಕನ ಕಡೆ ಗ್ರಹಚಾರ ತಿರುಗಿಕೊಂಡಿದೆ! ಯುವಕನಿಗೆ ಚಪ್ಪಲಿ ಏಟು ಕೊಟ್ಟಿದ್ದಾಳೆ ಯುವತಿ. ಇಷ್ಟೆಲ್ಲಾ ಡ್ರಾಮಾ ನಡೆದು, ಕಡೆಗೆ ಮಣಿಪಾಲ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಮೆಡಿಕಲ್ ಟೆಸ್ಟ್ಗೆ ಒಳಪಡಿಸಿದ ನಂತರ ಯುವತಿಯನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.