ಅಳವಂಡಿ: ಮಾಸಿಕ ಸಂತೆಯು ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡಲಿದೆ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.
ಹಿರೇಸಿಂದೋಗಿಯಲ್ಲಿ ಗ್ರಾಮ ಪಂಚಾಯಿತಿ, ಶ್ರೀಲಕ್ಷ್ಮೀ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಏರ್ಪಡಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸಂತೆ ಅನಕೂಲವಾಗಲಿದೆ ಎಂದರು.
ಪಿಡಿಒ ಅಂದಿಗಾಲಪ್ಪ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆಯರು ಸ್ವಯಂ ಉದ್ಯೋಗದೊಂದಿಗೆ ಬದುಕು ರೂಪಿಸಿಕೊಳ್ಳಬೇಕು ಎಂದರು.
ಗ್ರಾಪಂ ವ್ಯಾಪ್ತಿಯ 25 ಸ್ವ ಸಹಾಯ ಗುಂಪಿನ ಮಹಿಳೆಯರು ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕರಾದ ವೆಂಕಟೇಶ, ವಿದ್ಯಾಲಕ್ಷ್ಮೀ, ಕಾರ್ಯದರ್ಶಿ ಮಹೇಶ್ವರಯ್ಯ, ಒಕ್ಕೂಟದ ಅಧ್ಯಕ್ಷೆ ಗಂಗಮ್ಮ, ಗ್ರಾಮದ ಮುಖಂಡರು, ಮಹಿಳೆಯರು, ಗ್ರಾಪಂ ಸಿಬ್ಬಂದಿ ಇದ್ದರು.