ನವದೆಹಲಿ: ಕೊರೊನಾ ವೈರಸ್ ದಾಳಿಗೆ ತುತ್ತಾಗಿರುವ ಚೀನಾದಿಂದ ಎರಡು ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆತಂದ ಏರ್ ಇಂಡಿಯಾ ಸಿಬ್ಬಂದಿಯ ಸ್ನೇಹ ಮಿಲನ ಕಾರ್ಯಕ್ರಮವು ಇಂದು ಸಂಪನ್ನಗೊಂಡಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಸಿಂಘ್ ಪುರಿ ಪ್ರಧಾನಿ ಮೋದಿಯವರಿಂದ ಸಹಿಯಾಗಿರುವ ವಿಶೇಷ ಅಭಿನಂದನಾ ಪತ್ರಗಳನ್ನು ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದಾರೆ.
ಜನವರಿ 31ರಂದು ಮೊದಲ ವಿಶೇಷ ವಿಮಾನವು ದೆಹಲಿಯಿಂದ ವುಹಾನ್ಗೆ ತೆರಳಿದ್ದು 324 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿತ್ತು. ಫೆ.1ರಂದು ಎರಡನೇ ವಿಶೇಷ ವಿಮಾನ ತೆರಳಿದ್ದು 323 ಭಾರತೀಯರನ್ನು ವಾಪಾಸು ಕರೆತಂದಿತ್ತು. ಈ ಎರಡೂ ವಿಮಾನಗಳಲ್ಲಿ ಒಟ್ಟು 68 ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದ್ದು ಅವರೆಲ್ಲರಿಗೂ ಪ್ರತ್ಯೇಕವಾಗಿ ಪ್ರಧಾನಿ ಮೋದಿಯವರ ಸಹಿಯಿರುವ ಅಭಿನಂದನಾ ಪತ್ರವನ್ನು ಹಸ್ತಾಂತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ದೀಪ್ ಸಿಂಗ್, “ಏರ್ ಇಂಡಿಯಾವು ಭಾರತದ ಆಸ್ತಿಯಾಗಿದೆ. 48 ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಮತ್ತು 82 ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ತೆರಳುವ ಈ ಏರ್ಲೈನ್ ತನ್ನ ಅದ್ಭುತ ಸಾಮರ್ಥ್ಯವನ್ನು ತೋರಿಸಿದೆ. ಚೀನಾದಿಂದ ಭಾರತೀಯರನ್ನು ವಾಪಾಸು ಕರೆ ತರುವಲ್ಲಿ ಏರ್ ಇಂಡಿಯಾ ಮಾಡಿದ್ದು ಶ್ಲಾಘನೀಯ ಕೆಲಸ. ಈ ವಿಚಾರವಾಗಿ ನಾನು ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದ ಕ್ಯಾಪ್ಟನ್ ಅಮಿತಾಬ್ ಸಿಂಗ್ ಅವರಿಗೆ ಪ್ರಶಂಶಿಸುತ್ತೇನೆ,” ಎಂದು ಹೇಳಿದರು.
ಈಗಾಗಲೇ ಎರಡು ವಿಮಾನಗಳಲ್ಲಿ ಚೀನಾದಲ್ಲಿದ್ದ 647 ಭಾರತೀಯರನ್ನು ಕರೆತರಲಾಗಿದ್ದು ಮುಂದಿನ ವಾರದಲ್ಲಿ ಇನ್ನೊಂದು ವಿಶೇಷ ವಿಮಾನದಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)