ನವದೆಹಲಿ: ಚಂದ್ರಯಾನ 3 ಮತ್ತು ಆದಿತ್ಯ ಎಲ್1 ಯೋಜನೆಗಳ ಯಶಸ್ಸಿನ ಆಧಾರದ ಮೇಲೆ 2035ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮತ್ತು 2040ರ ವೇಳೆ ಚಂದ್ರನಲ್ಲಿಗೆ ಮೊದಲ ಭಾರತೀಯ ಗಗನಯಾತ್ರಿಯನ್ನು ಕಳುಹಿಸುವ ಗುರಿಯ ಬಗ್ಗೆ ಇಸ್ರೋ ಅಧಿಕಾರಿಗಳ ಬಳಿ ಪ್ರಧಾನಿ ಮೋದಿ ವಿವರಿಸಿದರು.
ಇಂದು ಇಸ್ರೋ ಅಧಿಕಾರಿಗಳ ಜತೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಮಹಾತಾಂಕ್ಷೆ ಗುರಿಗಳ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು.
ಈ ಪ್ರಮುಖ ಗುರಿಗಳನ್ನು ಅರ್ಥ ಮಾಡಿಕೊಂಡು ಬಾಹ್ಯಾಕಾಶ ವಿಭಾಗ ಚಂದ್ರನ ಅನ್ವೇಷಣೆಗೆ ರೋಡ್ಮ್ಯಾಪ್ ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದು, ಇದರಲ್ಲಿ ಸರಣಿ ಚಂದ್ರಯಾನ ಮಿಷನ್, ಮುಂದಿನ ಪೀಳಿಗೆಯ ಉಡಾವಣ ವಾಹನ (ಎನ್ಜಿಎಲ್ವಿ-ನೆಕ್ಸ್ಟ್ ಜನರೇಷನ್ ಲಾಂಚಿಂಗ್ ವೆಹಿಕಲ್), ಹೊಸ ಲಾಂಚ್ ಪ್ಯಾಡ್ ನಿರ್ಮಾಣ ಮತ್ತು ಮಾನವ ಕೇಂದ್ರಿತ ಪ್ರಯೋಗಾಲಯಗಳು ಹಾಗೂ ಸಂಬಂಧಿತ ತಂತ್ರಜ್ಞಾನಗಳು ಒಳಗೊಂಡಿರಲಿದೆ.
ಇದೇ ಸಭೆಯಲ್ಲಿ ಗಗನಯಾನ ಮಿಷನ್ ಪ್ರಗತಿಯ ಬಗ್ಗೆಯೂ ಚರ್ಚಿಸಲಾಯಿತು. ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲ ಸ್ವದೇಶಿ ಮಿಷನ್ ಆಗಿದ್ದು, ಹ್ಯೂಮ್ ರೇಟೆಡ್ ಲಾಂಚಿಂಗ್ ವೆಹಿಕಲ್ನಂತಹ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿ ಸೇರಿದಂತೆ ಗಗನಯಾನದ ಗ್ಗೆ ಬಾಹ್ಯಾಕಾಶ ಇಲಾಖೆಯು ಗಮನಾರ್ಹ ಮಾಹಿತಿಗಳನ್ನು ಪ್ರಧಾನಿ ಮೋದಿಗೆ ವಿವರಿಸಿದರು.
ಇದನ್ನೂ ಓದಿ: ‘ಮೋದಿಯನ್ನು ಅಧಿಕಾರಕ್ಕೆ ತಂದ್ರೆ ಉಳಿತೀರಿ’ ಎಂದ ಸ್ವಾಮೀಜಿ: ಒಂದೇ ದಿನದಲ್ಲಿ ಇಲ್ಲವಾದ ‘ಭವಿಷ್ಯ’!
ಹ್ಯೂಮನ್ ರೇಟೆಡ್ ಲಾಂಚ್ ವಹಿಕಲ್(ಎಚ್ಎಲ್ವಿಎಂ3)ನ ಸಿಬ್ಬಂದಿರಹಿತ ಮೂರು ಕಾರ್ಯಾಚರಣೆಗಳು ಒಳಗೊಂಡಂತೆ ಸುಮಾರು 20 ಪ್ರಮುಖ ಪರೀಕ್ಷೆಗಳನ್ನು ಇಸ್ರೋ ಯೋಜಿಸಿದೆ. ಕ್ರ್ಯೂ ಎಸ್ಕೇಪ್ ಸಿಸ್ಟಮ್ ಟೆಸ್ಟ್ ವೆಹಿಕಲ್ನ ಮೊದಲ ಪ್ರದರ್ಶನ ಹಾರಾಟವನ್ನು 2023ರ ಅಕ್ಟೋಬರ್ 21 ರಂದು ನಿಗದಿಪಡಿಸಲಾಗಿದೆ. ಈ ಮಿಷನ್ 2025ರಲ್ಲಿ ಉಡಾವಣೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಗಗನಯಾನ ಮಿಷನ್ ಯಶಸ್ಸು ಸಾಧಿಸಿದ್ದಲ್ಲಿ ಬಾಹ್ಯಕಾಶಕ್ಕೆ ಮಾನವನನ್ನು ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಲಿದೆ. ಸದ್ಯ ಅಮೆರಿಕ, ರಷ್ಯಾ ಮತ್ತು ಚೀನಾ ಈ ಹೆಗ್ಗಳಿಕೆಯನ್ನು ಹೊಂದಿವೆ. ಗಗನಯಾನ ಬಾಹ್ಯಾಕಾಶ ನೌಕೆಯು ಸಂಪೂರ್ಣ ಸ್ವಾಯತ್ತವಾಗಿದ್ದು, 5.3-ಟನ್ ಮಾಡ್ಯೂಲ್ ಹೊಂದಿದೆ. ಮೂರು-ಸದಸ್ಯ ಸಿಬ್ಬಂದಿಯನ್ನು ಕಕ್ಷೆಗೆ ಸಾಗಿಸಲು ಮತ್ತು ಏಳು ದಿನಗಳವರೆಗಿನ ಕಾರ್ಯಾಚರಣೆಯ ಅವಧಿಯ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಲು ವಿನ್ಯಾಸಗೊಳಿಸಲಾಗಿದೆ.
ವೀನಸ್ (ಶುಕ್ರ) ಆರ್ಬಿಟರ್ ಮಿಷನ್ ಮತ್ತು ಮಾರ್ಸ್ (ಮಂಗಳ) ಲ್ಯಾಂಡರ್ ಸೇರಿದಂತೆ ಅಂತರಗ್ರಹ ಕಾರ್ಯಾಚರಣೆಗಳತ್ತ ಕೆಲಸ ಮಾಡಲು ಭಾರತೀಯ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಕರೆ ನೀಡಿದರು. ಭಾರತದ ಸಾಮರ್ಥ್ಯಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಎತ್ತರವನ್ನು ಏರಲು ರಾಷ್ಟ್ರದ ಬದ್ಧತೆಯನ್ನು ದೃಢಪಡಿಸಿದರು. (ಏಜೆನ್ಸೀಸ್)
ಭಾರತ ವಿರುದ್ಧ ಪಾಕ್ ಹೀನಾಯ ಸೋಲಿಗೆ ವಾಮಾಚಾರ ಕಾರಣ ಎಂದ ಟಿಕ್ಟಾಕರ್ಗೆ ಟಕ್ಕರ್ ಕೊಟ್ಟ ನೆಟ್ಟಿಗರು!