ವಿಜಯಪುರ: ಮಣಿಪುರದಲ್ಲಿ ಹೆಣ್ಣು ಮಕ್ಕಳಿಬ್ಬರನ್ನು ಬೆತ್ತಲೆ ಮೆರವಣಿಗೆ ನಡೆಸಿದ್ದಲ್ಲದೇ ಅತ್ಯಾಚಾರಗೈದಿರುವ ಪ್ರಕರಣವನ್ನು ಎಐಡಿಎಸ್ಒ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ ಹಾಗೂ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ತಿಳಿಸಿದ್ದಾರೆ.
ಸಮುದಾಯದ ಹೆಸರಿನಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆ, ದಾಳಿ, ಅತ್ಯಾಚಾರ ಹಾಗೂ ಗುಂಪು ಘರ್ಷಣೆ ಖಂಡನೀಯ. ಇದೀಗ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಗುಂಪೊಂದು ಸಾಮೂಹಿಕವಾಗಿ ಅತ್ಯಾಚಾರವೂ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದೊಂದು ಅಮಾನವೀಯ ಕೃತ್ಯ ಎಂದಿದ್ದಾರೆ.
ಮಣಿಪುರದಲ್ಲಿ ಕಳೆದ ಎರಡು ತಿಂಗಳಿಂದ ಎಡೆಬಿಡದೇ ಘರ್ಷಣೆಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮುದಾಯಗಳ ನಡುವೆ ವಿಭಜನೆಯುಂಟು ಮಾಡಿ ಮಣಿಪುರ ಹೊತ್ತಿ ಉರಿಯಲು ಕಾರಣವಾಗಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಡೀ ದೇಶ ಆಘಾತಕ್ಕೆ ಒಳಗಾಗಿದೆ. ಆದರೆ ಅಲ್ಲಿನ ಮುಖ್ಯಮಂತ್ರಿ ಹೇಳಿಕೆ ನೀಡುತ್ತಾ ‘ಈ ಹಿಂದೆಯೂ ಇಂಥ ನೂರಾರು ಘಟನೆಗಳು ನಡೆದಿವೆ’ ಎಂದಿರುವುದು ನಾಚಿಕೆಗೇಡು ಎಂದಿದ್ದಾರೆ.
ಘಟನೆ ಸಂದರ್ಭ ಪೊಲೀಸರಿಂದ ಸಹಾಯ ಸಿಕ್ಕಿಲ್ಲ, ಅವರೇ ಆರೋಪಿಗಳ ಕೈಗೆ ತಮ್ಮನ್ನು ಒಪ್ಪಿಸಿದ್ದಾಗಿ ಸಂತ್ರಸ್ತೆಯರು ತಿಳಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಪ್ರಕ್ಷೋಭೆಯನ್ನು ಬಿಜೆಪಿ ಸರ್ಕಾರ ಹೇಗೆ ನಿಭಾಯಿಸಿದೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಸ್ಥಿತಿಯೇ ಸಾಕ್ಷಿಯಾಗಿದೆ. ಸರ್ಕಾರವು ತನ್ನ ಅಜೆಂಡಾವನ್ನು ಮುಂದುವರಿಸಲು, ವೈಷಮ್ಯವನ್ನು ಸೃಷ್ಟಿಸಿ, ಆ ಮೂಲಕ ಸಮುದಾಯಗಳ ನಡುವಿನ ವಿಭಜನೆಯನ್ನು ಪ್ರೋತ್ಸಾಹಿಸಿದ್ದಾರೆ. ಸರ್ಕಾರದಿಂದ ಸಾಂತ್ವನದ ಮಾತುಗಳು ಅತ್ಯಂತ ಸಾಮಾನ್ಯ ರೀತಿಯದ್ದಾಗಿದ್ದು, ವಿಳಂಬವಾಗಿದೆ. ಸಮುದಾಯದ ಹೆಸರಿನಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಿಂಸಾಚಾರಗಳು ಮಾನವೀಯತೆ ನಾಚಿಕೆ ಪಡುವಂತಹ ಸಂಗತಿಯಾಗಿದೆ. ಇವು ಸ್ವಯಂಪ್ರೇರಿತವಾಗಿ ನಡೆಯುವ ಘರ್ಷಣೆಗಳಲ್ಲ ಬದಲಿಗೆ ಆಳುವ ವರ್ಗದ ಕೈವಾಡ ಎಂದು ಜಂಟಿ ಹೇಳಿಕೆಯಲ್ಲಿ ಅವರು ಆಕ್ರೋಶ ಹೊರಹಾಕಿದ್ದಾರೆ.