ಬೆಳಗಾವಿ: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡಬೇಕಾದ ಅಗತ್ಯವಿಲ್ಲ. ಇನ್ಮುಂದೆ ಕರೊನಾ ವೈರಸ್ನೊಂದಿಗೆ ನಾವು ಬದುಕಬೇಕಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗಡಿ ಪ್ರದೇಶದಲ್ಲಿ ಆತಂಕ ಸೃಷ್ಟಿಸುವುದಕ್ಕಾಗಿಯೇ ಕರೊನಾ ವೈರಸ್ ಬಿಡಲಾಗಿದೆ ಎಂದು ಪರೋಕ್ಷವಾಗಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದರು. ಪ್ಲೇಗ್, ಹಂದಿ ಜ್ವರ ಮತ್ತಿತರ ರೋಗಗಳು ಈಗಾಗಲೇ ಹಲವು ಬಾರಿ ದೇಶದಲ್ಲಿ ಬಂದು ಹೋಗಿವೆ. ಹಾಗಾಗಿ ಕರೊನಾದೊಂದಿಗೆ ನಾವು ಬದುಕು ಸಾಗಿಸಬೇಕು.
ಇದು ಗುಣಮುಖವಾಗದ ರೋಗವೇನಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದು, ಮುಂಜಾಗ್ರತೆ ವಹಿಸಿದರೆ ಕರೊನಾ ಸೋಂಕಿತರು ಗುಣಮುಖವಾಗುತ್ತಾರೆ. ಅದಕ್ಕೆ ಯಾರೂ ಹೆದರಬೇಕಿಲ್ಲ ಎಂದು ತಿಳಿಸಿದರು. ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ, ಪ್ರತಿಯೊಬ್ಬರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು ಎಂದು ಸಚಿವರು ಕೋರಿದರು.