ಚಿಕ್ಕಬಳ್ಳಾಪುರ: ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆಕರ್ಷಕ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯ ಅನಾವರಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಮತ್ತು ಯೋಗ ಕೇಂದ್ರವು ರಾಜ್ಯದಲ್ಲಿ ತಲೆ ಎತ್ತಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಸಮೀಪ ಈಶ ಫೌಂಡೇಷನ್ ವತಿಯಿಂದ ಮಕರ ಸಂಕ್ರಾಂತಿ ಹಬ್ಬದಂದು ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯೋಗಿ ಪ್ರತಿಮೆ ಅನಾವರಣಗೊಳಿಸಿದರು. ತಮಿಳುನಾಡಿನ ಕೊಯಮತ್ತೂರಿನ ಮಾದರಿಯಲ್ಲಿ ಆಕರ್ಷಿಸುತ್ತಿರುವ ಇಲ್ಲಿನ ಧಾರ್ಮಿಕ ಮತ್ತು ಪ್ರವಾಸಿ ತಾಣದಲ್ಲಿ ಸೇರಿದ್ದ ದೊಡ್ಡ ಭಕ್ತ ಸಮೂಹವೂ ಸಾಕ್ಷಿಯಾಯಿತು.
ಕಳೆದ 2022ನೇ ಸಾಲಿನ ಫೆಬ್ರವರಿಯಲ್ಲಿ ಜಿಲ್ಲಾ ಕೇಂದ್ರದಿಂದ 7 ಕಿ.ಮೀ. ದೂರದಲ್ಲಿರುವ ಕೌರನಹಳ್ಳಿಯಲ್ಲಿ ಸದ್ಗುರು, ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿದ್ದರು. ಇದರ ನಡುವೆ ಐದೇ ತಿಂಗಳಲ್ಲಿ ಬೃಹತ್ ಆದಿಯೋಗಿ ಪ್ರತಿಮೆ ನಿರ್ಮಾಣದ ಕೆಲಸವು ಪೂರ್ಣಗೊಂಡಿದೆ. ಸಂಕ್ರಾಂತಿ ಹಬ್ಬದ ದಿನದಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಸಿಕ್ಕಿದೆ. ನಾಗಮಂಟಪ, ದೇವಿ ದೇವಸ್ಥಾನ, ಈಶ ಸಂಸ್ಕೃತಿ, ಹೋಂ ಸ್ಕೂಲ್, ಯೋಗೇಶ್ವರ ಲಿಂಗಕೇಂದ್ರ, ಅಧ್ಯಯನ ಕೇಂದ್ರ, ಲೀಡರ್ಶಿಪ್ ಅಕಾಡೆಮಿ ಸೇರಿದಂತೆ ಇತರ ಸಂಸ್ಥೆಗಳು ತಲೆ ಎತ್ತಲಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಕ್ತರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಂಡಿದೆ. ಈಗ ಆದಿಯೋಗಿ, ಯೋಗೀಶ್ವರ ಲಿಂಗ ದರ್ಶನಕ್ಕೆ ಅವಕಾಶವಿದೆ.
ಮೈಮರೆಸಿದ ಆದಿಯೋಗಿ ಸಾಕ್ಷಾತ್ಕಾರ: ಕತ್ತಲು ಬೆಳಕಿನ ಸೃಷ್ಟಿಯ ಚಳಕದಿಂದ ಒಂದೊಂದೇ ಭಾಗದ ಮೂಲಕ ನೂತನ ಪ್ರತಿಮೆಯಲ್ಲಿ ಕಂಡ ಆದಿಯೋಗಿ ದಿವ್ಯ ಸಾಕ್ಷಾತ್ಕಾರವು ಜನರ ಮೈ ಮರೆಸಿತು. ನೆರೆದಿದ್ದವರು ಭಕ್ತಿ ಪರವಶರಾಗಿ ಕೆಲ ಕಾಲ ಅನ್ಯಲೋಕದಲ್ಲಿ ತಲ್ಲೀನರಾಗಿರುವಂತೆ ಕಂಡು ಬಂದರು. ಕತ್ತಲಿನ ವಾತಾವರಣದಲ್ಲಿ ಮೊದಲಿಗೆ ಪ್ರತಿಮೆಯಲ್ಲಿ ಬೆಳದಿಂಗಳ ಅರ್ಧಾಕೃತಿಯ ಚಂದ್ರ, ದಿವ್ಯ ದೃಷ್ಟಿಯ ಮೂರನೇ ಕಣ್ಣು, ನೀಳವಾದ ಜಡೆ, ಹೆಡೆ ಹೆತ್ತಿದ ನಾಗದೇವ, ವಿಷವನ್ನು ನುಂಗಿದ ಕಂಠದ ದರ್ಶನವು, ಆಗಾಗ ಬದಲಾವಣೆಯ ಬಣ್ಣದಲ್ಲಿ ಲೈಟಿಂಗ್ ಭಕ್ತರನ್ನು ಮೂಕಸ್ಮಿತರನ್ನಾಗಿಸಿತು. ಎದೆಯ ಮೇಲ್ಭಾಗದಲ್ಲಿ ಆಂತರಿಕ ಶಿವ, ಸಪ್ತ ಋಷಿಯ ಯೋಗದ ನೆರಳು, ಆದಿಯೋಗಿಯ ಉಸಿರಾಟ, ಪಾರ್ವತಿ ದೇವಿ, ಅರ್ಧನಾರೀಶ್ವರ ಮನಮೋಹಕ ದೃಶ್ಯಗಳಿಗೆ ಅನುಗುಣವಾಗಿ ಸದ್ಗುರುಗಳು ವಿವರಣೆ ನೀಡಿದರು. ಮೋಡಗಳ ಸದ್ದಿನ ಆರ್ಭಟ, ಕಹಳೆ, ಡಮರುಗು, ಡೋಲು, ಶಂಕನಾದದೊಂದಿಗೆ ಓಂಕಾರ ಸೇರಿದಂತೆ ಮಂತ್ರಗಳ ಪಠಣ, ಭಕ್ತರ ಉದ್ಘೋಷಗಳೊಂದಿಗೆ ಆದಿಯೋಗಿ ಪ್ರತಿಮೆ ಅನಾವರಣಗೊಂಡಿತು.
ಆಧ್ಯಾತ್ಮಿಕ ಕಲಾ ಪ್ರದರ್ಶನ: ರಾಷ್ಟ್ರ ಮಟ್ಟದ ಕಲಾವಿದರಿಂದ ಮಾದೇವ ಮಾದೇವ, ಶಿವನಿಲ್ಲದೇ ಗತಿ ಯಾರಿಲ್ಲ ಸೇರಿದಂತೆ ಶಿವಸ್ತುತಿಯ ಭಕ್ತ ಗೀತೆಗಳ ಗಾಯನ, ಅರ್ಧದೇಹ ಮಂಗಳಂ, ನಾಗನಾಥ ಆಶ್ರಯಂ ಹಾಡಿನೊಂದಿಗೆ ಆದಿಯೋಗಿಗೆ ಮಹಾ ಮಂಗಳಾರತಿ, ಕಂಸಾಳೆ ನೃತ್ಯ, ಡೊಳ್ಳು ಕುಣಿತ, ಕೇರಳ ತೈಯ್ಯಂ ದೈವ ಬೆಂಕಿ ನರ್ತನ, ಭರತನಾಟ್ಯ, ಮಾರ್ಷಲ್ ಆರ್ಟ್ಸ್ ಕಾರ್ಯಕ್ರಮಗಳು ಗಮನ ಸೆಳೆದವು.
ಆದಿಯೋಗಿ ಹೇಗಿದ್ದಾರೆ?: ಪ್ರತಿಮೆ ಅನಾವರಣಗೊಳ್ಳುತ್ತಿದ್ದಂತೆ ಆದಿಯೋಗಿ ಹೇಗಿದ್ದಾರೆ ಎಂಬುದಾಗಿ ಸದ್ಗುರು ಪ್ರಶ್ನಿಸಿದರು. ಗುಡ್ ಆ್ಯಂಡ್ ಹ್ಯಾಂಡ್ಸಮ್ ಆಗಿ ಇಲ್ಲವೇ? ಸುಂದರ ಸ್ವರೂಪ ಕಾಣುತ್ತಿದೆಯೇ? ಎನ್ನುತ್ತಿದ್ದಂತೆ ಭಕ್ತರಿಂದ ಖುಷಿಯ ಜೈಕಾರಗಳು ಕೂಗಿ ಬಂದವು. ಹಲವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಸಾಮಾನ್ಯ ಸ್ಥಿತಿಯಲ್ಲಿ ಕಡುಕಪ್ಪು, ನೀಲಿ ವರ್ಣ ಸೇರಿದಂತೆ ನಾನಾ ಬಣ್ಣಗಳಲ್ಲಿ ಪ್ರತಿಮೆಯ ಅಂದವು ಹೆಚ್ಚಾಗಿದೆ ಎನ್ನುವುದೇ ನೋಡುಗರ ಮಾತಾಗಿದೆ.
ಸದ್ಗುರುವಿಗೆ ಸಿಎಂ ಬಣ್ಣನೆ: ತಪಸ್ಸು, ಅನುಭವ, ವಿಚಾರಧಾರೆಗಳು, ಸಾಧನೆ ಮತ್ತು ಸಮನ್ವಯತೆಯಲ್ಲಿ ವೈಶಿಷ್ಟ್ಯತೆಯನ್ನು ಹೊಂದಿರುವುದರಿಂದ ಸದ್ಗುರುಗಳು, ಕಾಲಾತೀತವಾದ ಸದಾ ಕಾಲದ ಗುರು ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಪ್ರತಿಮೆಯ ಅನಾವರಣದ ಬಳಿಕ ಮಾತನಾಡಿದ ಸಿಎಂ, ಹಿಂದೆ ತಮಿಳುನಾಡಿನ ಕೊಯಮತ್ತೂರಿಗೂ ಭೇಟಿ ನೀಡಿ ಕೆಲ ಕ್ಷಣ ಆದಿಯೋಗಿಯನ್ನು ಕಣ್ಣಿಟ್ಟು ನೋಡಿದಾಗ ವಿಶೇಷ ದರ್ಶನ ಅನುಭವವಾಯಿತು. ಇದನ್ನು ಎಲ್ಲರೂ ಪರೀಕ್ಷಿಸಬಹುದು. ಭವಿಷ್ಯದ ದಾರಿದೀಪವಾಗಿ ಕಾಣಿಸುತ್ತದೆ ಎಂದರು.
ದೇಶದಲ್ಲಿ ದೊಡ್ಡ ಸಂಘರ್ಷಗಳು ಕಂಡು ಬರುತ್ತಿವೆ. ಇದರ ನಡುವೆ ಹೊಸರಸ್ತೆ, ದೊಡ್ಡ ಕಟ್ಟಡಗಳ ನಿರ್ಮಾಣದಿಂದ ಮಾತ್ರ ಬಲಿಷ್ಠ ದೇಶ ಕಾಣುವುದಿಲ್ಲ. ಪ್ರತಿಯೊಬ್ಬ ಪ್ರಜೆಯಲ್ಲೂ ಉತ್ತಮ ಚಾರಿತ್ರ್ಯ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಈಶ ಫೌಂಡೇಷನ್ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಸಚಿವ ಡಾ ಕೆ.ಸುಧಾಕರ್, ಶಿಕ್ಷಣ ಸಚಿವ ನಾಗೇಶ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮತ್ತಿತರರು ಇದ್ದರು.
ಯೋಗದ ಮೂಲ ಪುಸ್ತಕ ಬಿಡುಗಡೆ: ಸದ್ಗುರು ಕನ್ನಡದಲ್ಲಿ ಬರೆದಿರುವ ಆದಿಯೋಗಿ ಯೋಗದ ಮೂಲ ಪುಸ್ತಕವನ್ನು ಸಚಿವ ಡಾ. ಕೆ.ಸುಧಾಕರ್ ಬಿಡುಗಡೆಗೊಳಿಸಿದರು. ಇದೇ ವೇಳೆ ಸಿಎಂ, ಸಚಿವರಿಗೆ ಆದಿಯೋಗಿ ಮತ್ತು ನಾಗರೂಪದ ಫಲಕವನ್ನು ನೀಡಿ ಸದ್ಗುರುಗಳು ಸನ್ಮಾನಿಸಿದರು.
ಈ ಗ್ರಾಮದಲ್ಲಿ ಪೋಸ್ಟ್ ಬೇಕು ಅಂದರೆ ಪೋಸ್ಟ್ಮ್ಯಾನ್ ಮನೆಗೆ ಹೋಗಬೇಕು!
9ನೇ ತರಗತಿ ವಿದ್ಯಾರ್ಥಿನಿ ಜತೆ ಬೆಳಗಾವಿಯಲ್ಲಿ ಶಿಕ್ಷಕನ ಪ್ರೇಮದಾಟ: ಖಾಸಗಿ ವಿಡಿಯೋ ವೈರಲ್
ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು