ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್, ಇದುವರೆಗೂ 35ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿ, ಅವರಿಂದ ಹೇಳಿಕೆಗಳನ್ನು ಪಡೆದಿದೆ. ಈ ಮಧ್ಯೆ, ಆದಿತ್ಯ ಚೋಪ್ರಾ ಸಹ ಮುಂಬೈ ಪೊಲೀಸ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಹೌದು, ಶನಿವಾರ ಬೆಳಿಗ್ಗೆ ಮುಂಬೈನ ವರ್ಸೋವಾ ಪೊಲೀಸ್ ಸ್ಟೇಶನ್ಗೆ ಹಾಜರಾದ ಆದಿತ್ಯ ಚೋಪ್ರಾ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ, ಸುಶಾಂತ್ ಕುರಿತಾಗಿ ಆದಿತ್ಯ ಏನೆಲ್ಲಾ ಹೇಳಿದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡಲಾಗಿದೆ.
ಇದನ್ನೂ ಓದಿ: ನೀವ್ಯಾಕೆ ‘ಪವಿತ್ರ ರಿಶ್ತಾ 2’ ಮಾಡಬಾರದು? ಏಕ್ತಾಗೆ ಅಂಕಿತಾ ಪ್ರಶ್ನೆ …
ಯಶ್ರಾಜ್ ಫಿಲಂಸ್ ಬ್ಯಾನರ್ನಡಿ ಸುಶಾಂತ್, ‘ಡಿಟೆಕ್ಟಿವ್ ಬ್ಯೋಮಕೇಶ ಭಕ್ಷಿ’ ಮತ್ತು ‘ಶುದ್ಧ್ ದೇಶಿ ರೊಮ್ಯಾನ್ಸ್’ ಚಿತ್ರಗಳಲ್ಲಿ ನಟಿಸಿದ್ದರು. ಶೇಖರ್ ಕಪೂರ್ ನಿರ್ದೇಶನದ ‘ಪಾನಿ’ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲಿಲ್ಲ.
ಹಾಗೆ ‘ಪಾನಿ’ ಚಿತ್ರ ನಿಲ್ಲುವುದಕ್ಕೆ ಕಾರಣ ಆದಿತ್ಯ ಅಲ್ಲ, ಸಲ್ಮಾನ್ ಖಾನ್ ಎಂದು ಹೇಳಲಾಗುತ್ತದೆ. ಆದಿತ್ಯಗೆ ಆ ಚಿತ್ರವನ್ನು ಮುಂದುವರೆಸಬೇಕು ಎಂಬ ಆಸೆ ಇತ್ತಂತೆ. ಆದರೆ, ಸುಶಾಂತ್ ಬಗ್ಗೆ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದ ಸಲ್ಮಾನ್ ಖಾನ್ ತಮ್ಮ ಬಲ ಉಪಯೋಗಿಸಿ, ‘ಪಾನಿ’ ಚಿತ್ರವು ಶುರುವಾಗದಂತೆ ತಡೆದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರೊನಾದಿಂದ ಆಸ್ಪತ್ರೆ ಪಾಲಾಗಿದ್ದ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆರೋಗ್ಯ ಈಗ ಹೇಗಿದೆ?
‘ಪಾನಿ’ ಚಿತ್ರವನ್ನು ನಿಲ್ಲಸಬೇಕು ಎಂದು ಸಲ್ಮಾನ್ ಬೆದರಿಕೆ ಹಾಕಿದಾಗ, ಆದಿತ್ಯ ಚೋಪ್ರಾ ಮೊದಲು ಒಪ್ಪಲಿಲ್ಲವಂತೆ. ಯಾವಾಗ ಅವರು ಬಗ್ಗಲಿಲ್ಲವೋ, ಆಗ ಸಲ್ಮಾನ್ ನೇರವಾಗಿ ‘ಸುಲ್ತಾನ್’ ಮತ್ತು ‘ಟೈಗರ್ ಜಿಂದಾ ಹೇ’ ಚಿತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದರಂತೆ.
ಅದಾಗಲೇ, ಆ ಎರಡೂ ಚಿತ್ರಗಳ ಮೇಲೆ ಸಾಕಷ್ಟು ಹಣ ಹೂಡಿದ್ದ ಆದಿತ್ಯ, ಬೇರೆ ದಾರಿ ಇಲ್ಲದೆ ‘ಪಾನಿ’ ಚಿತ್ರವನ್ನು ನಿಲ್ಲಿಸಿದ್ದಾರೆ ಎಂದು ಬಾಲಿವುಡ್ನಲ್ಲಿ ಹೇಳಲಾಗುತ್ತದೆ. ಅದೇ ಕಾರಣಕ್ಕೆ, ಆದಿತ್ಯ ಅವರನ್ನು ಮುಂಬೈ ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದಾರೆ.
ಆದಿತ್ಯ ಚೋಪ್ರಾ ಅಲ್ಲದೆ, ಸುಶಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮನಶ್ಯಾಸ್ತ್ರಜ್ಱ ಡಾ. ಕೇರ್ಸಿ ಚಾವ್ಡಾ ಅವರನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸುಶಾಂತ್ ಅವರ ಮಾನಸಿಕ ಸ್ಥಿತಿ ಹೇಗಿತ್ತು, ಅವರು ಏನೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ ಯಾವೆಲ್ಲಾ ಮಾತ್ರೆಗಳನ್ನು ನೀಡಲಾಗಿತ್ತು ಎಂಬ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
PHOTOS: ಗ್ಲಾಮರಸ್ ಅವತಾರದಲ್ಲಿ ‘ರಾಬರ್ಟ್’ ನಾಯಕಿ ಆಶಾ ಭಟ್ ಫೋಟೋ ಝಲಕ್…