ಕೊಪ್ಪಳ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್ ಕೊಪ್ಪಳದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಹಲವರು ಪೊಲೀಸರ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಿ, ಪರಿಹಾರದ ಭರವಸೆ ಪಡೆದರು.
ನಿಗದಿಗಿಂತ ಒಂದು ಗಂಟೆ ತಡವಾಗಿ ಬಂದ ಎಡಿಜಿಪಿ, ಜನರ ಕ್ಷಮೆ ಕೋರಿ ಮೊದಲು ಅಹವಾಲು ಆಲಿಸಿದರು. ಜೂಜಾಟ, ಮಟ್ಕಾ, ಟ್ರಾಫಿಕ್, ಶ್ರೀಗಂಧ ಕಳ್ಳತನ, ಮರಳು ದಂಧೆ, ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಹಾಗೂ ಭಾಗ್ಯನಗರ, ಮುನಿರಾಬಾದ್ ಬಳಿ ಹೆಚ್ಚುವರಿ ಪೊಲೀಸ್ ಠಾಣೆ ಆರಂಭಕ್ಕೆ ಜನರು ಆಗ್ರಹಿಸಿದರು.
ಅಹವಾಲು ಕೇಳಿದ ಆಲೋಕ್ ಕುಮಾರ್, ಗಾಂಜಾ ಮಟ್ಟ ಹಾಕಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಶ್ರೀಗಂಧ ಕಳ್ಳತನ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯ ಕೊಡಿಸಲು ಸ್ಥಳದಲ್ಲೇ ನಿರ್ದೇಶನ ನೀಡಿದರು. ಹೆಚ್ಚುವರಿ ಪೊಲೀಸರ ನಿಯೋಜನೆ, ಹೊಸ ಠಾಣೆ ಅಗತ್ಯತೆ, ಅಪರಾಧ ಪ್ರಕರಣಗಳ ಸಂಖ್ಯೆ ಇನ್ನಿತರ ಮಾಹಿತಿ ಸಹಿತ ಪ್ರಸ್ತಾವನೆ ಸಲ್ಲಿಸುವಂತೆ ಎಸ್ಪಿಗೆ ಸೂಚಿಸಿದರು.
ಹಲವರು ಎಡಿಜಿಪಿಗೆ ಹೂಗುಚ್ಛ ನೀಡಿ ಶುಭಕೋರಿದರು. ಸಭೆ ಬಳಿಕ ಪೊಲೀಸ್ ಅಧಿಕಾರಿಳೊಂದಿಗೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಎಡಿಜಿಪಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.