ಜಗಳೂರು: ಪ್ರಧಾನಮಂತ್ರಿ ಆದರ್ಶ ಗ್ರಾಮ ಹುಚ್ಚಂಗಿಪುರ ಗ್ರಾಮದ ಅಭಿವೃದ್ಧಿಗೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೇಷ್ಮಾ ಡಿ ಕೌಸರ್ ತಿಳಿಸಿದರು.
ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಸೋಲಾರ್ ದೀಪ, ಹೈಮಾಸ್ಟ್ ದೀಪ ಅಳವಡಿಸಿ ಕತ್ತಲು ಮುಕ್ತ ಗ್ರಾಮ ಮಾಡಲಾಗಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದರು.
ಅಂಗನವಾಡಿಗೆ ಭೇಟಿ ನೀಡಿದ ವೇಳೆ ಕತ್ತಲಲ್ಲಿ ಕುಳಿತಿದ್ದ ಮಕ್ಕಳು, ಅಲ್ಲಲ್ಲಿ ಬಿದ್ದಿದ್ದ ಮಣ್ಣಿನ ರಾಶಿ, ಮೊಳ ಉದ್ದ ಬೆಳೆದಿರುವ ಗಿಡಗಂಟೆಗಳನ್ನು ಕಂಡ ಕೌಸರ್, ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿಗೆ ಕರೆ ಮಾಡಿ, ಹೊಸ ಅಂಗನವಾಡಿ ಕೇಂದ್ರ ಆರಂಭವಾಗುವವರೆಗೂ ಮಕ್ಕಳಿಗೆ ರಜೆ ಕೊಡಿ ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ತಾಲೂಕಿನ 32 ಗ್ರಾಮಗಳು ಪ್ರಧಾನ ಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿವೆ. ವಿವಿಧ ಯೋಜನೆಗಳ ಅನುದಾನಗಳನ್ನು ಬಳಿಸಿಕೊಂಡು ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
11 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ, 2 ಲಕ್ಷ ರೂ. ವೆಚ್ಚದ ಶೌಚಗೃಹ ಹಾಗೂ ಅಂಗನವಾಡಿ ಕೇಂದ್ರಗಳನ್ನು ಖುದ್ದು ಪರಿಶೀಲಿಸಿದರು.
ಇಂಜಿನಿಯರ್ ಚಂದ್ರಶೇಖರ್ ಇತರರಿದ್ದರು.