ಬೆಂಗಳೂರು: ನಟಿ ಸುರಭಿ ಅವರು ಸಾವಿನ ಕದ ತಟ್ಟು ಬದುಕಿ ಬಂದಿದ್ದೇನೆ ಎಂದು ಇತ್ತೀಚೆಗಷ್ಟೇ ಸುರಭಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಯಾಕೆ ನಟಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.
ಸುರಭಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ನಲ್ಲಿ, ಇತ್ತೀಚಿಗೆ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೆಂದೂ ನಡೆಯದ ಒಂದು ಘಟನೆ ನಡೆದಿದೆ. ನಾನು ಸಾವಿನ ಅಂಚಿಗೆ ಹೋಗಬಹುದು ಎಂದು ನನಗೆ ಅನಿಸಿತು. ನಾನು ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು. ಈ ವೇಳೆ ವಿಮಾನ ನಿಯಂತ್ರಣ ತಪ್ಪಿತ್ತು. ನನ್ನ ಜತೆ ಫ್ಲೈಟ್ನಲ್ಲಿದ್ದವರೆಲ್ಲ ತುಂಬಾ ಭಯಗೊಂಡಿದ್ದರು.
ಪೈಲಟ್ ಜಾಗರೂಕರಾಗಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ನಾವೆಲ್ಲರೂ ಅದರಿಂದ ಬದುಕುಳಿದೆವು. ಆ ಘಟನೆಯನ್ನು ಊಹಿಸಿಕೊಂಡರೆ ಈಗಲೂ ಭಯವಾಗುತ್ತದೆ. ನಾನು ಸಾವಿನ ಸಮೀಪದಿಂದ ಪಾರಾದೆ. ಇದು ಸಂಭವಿಸಿದ ನಂತರ, ನನ್ನ ಸಕಾರಾತ್ಮಕ ಚಿಂತನೆಯಲ್ಲಿ ನನಗೆ ಹೆಚ್ಚು ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಸುರಭಿಯ ಈ ಪೋಸ್ಟ್ ವೈರಲ್ ಆಗಿದೆ. ಆದರೆ ಈ ಘಟನೆಯಲ್ಲಿ ಸುರಭಿ ಅಪಾಯದಿಂದಾ ಪಾರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ. ಆದರೆ ಸುರಭಿ ಎಲ್ಲಿಗೆ ಹೋಗುತ್ತಿದ್ದರು?, ಯಾವ ವಿಮಾನದಲ್ಲಿ? ಮತ್ತು ಈ ಘಟನೆ ಎಲ್ಲಿ ನಡೆದಿದೆ? ಯಾವಾಗ ನಡೆದಿದೆ ಎನ್ನುವ ಯಾವುದೆ ಮಾಹಿತಿಯೂ ಇಲ್ಲ. ನಟಿ ಅಪಾಯದಿಂದ ಪಾರಾಗಿರುವುದಕ್ಕೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕನ್ನಡ, ತಮಿಳಿ, ತೆಲುಗಿನಲ್ಲಿ ನಟಿಸುತ್ತಿರುವ ನಟಿ ಸುರಭಿ. ಸ್ಯಾಂಡಲ್ವುಡ್ ನಟ ಗಣೇಶ್ ಅವರ ಜತೆ ಸಖತ್ ಸಿನಿಮಾದಲ್ಲಿ ನಟಿಸಿದ್ದಾರೆ. ಬೀರುವಾ, ಎಕ್ಸ್ಪ್ರೆಸ್ ರಾಜಾ, ಒಕ್ಕೆ ಕಶಂ… ಹೀಗೆ ಹಲವು ಉತ್ತಮ ಸಿನಿಮಾಗಳ ಮೂಲಕ ತೆಲುಗಿನಲ್ಲಿ ಮಿಂಚಿದ್ದ ಸುರಭಿ ಸದ್ಯ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ.