ಬೆಂಗಳೂರು: ಕರೊನಾದಿಂದಾಗಿ ಪೂರ್ತಿ ಸಮಾಜವೇ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಅನೇಕರು ಸಹಾಯಹಸ್ತವನ್ನೂ ಚಾಚಿದ್ದಾರೆ. ಅದೇ ರೀತಿ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಅನೇಕರ ಸಹಾಯಕ್ಕೆ ಮುಂದಾಗಿದ್ದು, ಇದೀಗ ಪಾಠ ಕಲಿಸುವ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಲಾರಂಭಿಸಿದ್ದಾರೆ.
“ನೀವು ರೂಪಿಸಿದ ಈ ವ್ಯಕ್ತಿತ್ವ.. ನೀವು ಕಲಿಸಿದ ವಿದ್ಯೆ.. ನೀವು ಕಲಿಸಿದ ಮಾತುಗಳು.. ಎಲ್ಲವನ್ನು ಗೌರವ ಮತ್ತು ಪ್ರೀತಿಯಿಂದ ನಿಮಗೆ ಹಿಂದಿರುಗಿಸುವ ಸಮಯ.. ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕರೋನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜತೆ ನಾವಿದ್ದೇವೆ ಅನ್ನುವ ಸಮಯ.” ಎಂದು ಸುದೀಪ್ ಅವರ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಗುರುಗಳಿಗೆ ಕಿಚ್ಚನ ನಮನ ಅಭಿಯಾನ ಆರಂಭಿಸಿದೆ.
ಈ ಅಭಿಯಾನದಲ್ಲಿ ಕರ್ನಾಟಕದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಾಗುವುದು. ಮೊದಲನೇ ಹಂತದಲ್ಲಿ 50 ಶಿಕ್ಷಕರಿಗೆ ತಲಾ 2000 ರೂಪಾಯಿ ಧನ ಸಹಾಯ ಮಾಡುವುದಾಗಿ ತಿಳಿಸಲಾಗಿದೆ.
ನೀವು ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರೆ, 6360334455 ಈ ಸಂಖ್ಯೆಗೆ ಕರೆ ಮಾಡಿ, ನಾವು ನಿಮಗೆ ಸಹಾಯ ಮಾಡಲು ಸಿದ್ಧವಿದ್ದೇವೆ ಎಂದಿದೆ ಕಿಚ್ಚನ ತಂಡ. ಈ ತಂಡದಿಂದ ಈ ಹಿಂದೆ ಅನೇಕ ಹಿರಿಯ ಕಲಾವಿದರಿಗೂ ಸಹಾಯ ಮಾಡಲಾಗಿತ್ತು.