More

    ಸಭೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ

    ಸೋಮವಾರಪೇಟೆ : ತಾಲೂಕು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಮಿತಿ ಸದಸ್ಯರು ಒತ್ತಾಯಿಸಿದರು.

    ತಹಸೀಲ್ದಾರ್ ನವೀನ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯ ಬಿ.ಈ.ಜಯೇಂದ್ರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ನಾಲ್ಕು ವರ್ಷಗಳಿಂದ ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಉದ್ದೇಶಪೂರ್ವಕವಾಗಿ ಗೈರಾಗುತ್ತಿದ್ದಾರೆ. ಅದರಲ್ಲೂ ಎಡಿಎಲ್‌ಆರ್ ಬರುತ್ತಿಲ್ಲ. ಪರಿಶಿಷ್ಟ ಜಾತಿಯವರ ಆಸ್ತಿ ದುರಸ್ತು ಮಾಡಿಕೊಡುತ್ತಿಲ್ಲ. ಜಾತಿನಿಂದನೆ ಮೊಕದ್ದಮೆಗಳ ತನಿಖೆಯ ಬಗ್ಗೆ ಡಿವೈಎಸ್‌ಪಿ ಅವರನ್ನು ಪ್ರಶ್ನಿಸಲು ಅವರೂ ಬರುತ್ತಿಲ್ಲ. ಪ್ರತಿ ಸಭೆ ಕಾಟಾಚಾರಕ್ಕೆ ನಡೆಯುತ್ತಿವೆ. ಅನುಪಾಲನಾ ವರದಿಯನ್ನು ಸಭೆಗೂ ಮುನ್ನ ನೀಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೈದರು.

    ವಿವಿಧ ಇಲಾಖಾಧಿಕಾರಿಗಳಿಗೆ ಸಭಾ ಸೂಚನಾ ಪತ್ರ ನೀಡಲಾಗಿದೆ. ಗೈರಾದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಸಮಸ್ಯೆಗಳ ಬಗ್ಗೆ ಲಿಖಿತವಾಗಿ ಕೊಟ್ಟರೆ, ಪ್ರತಿಯೊಂದು ಅರ್ಜಿಯನ್ನು 15 ದಿನಗಳ ಒಳಗೆ ವಿಲೇವಾರಿ ಮಾಡಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.
    ಹೆಮ್ಮನೆ ಗ್ರಾಮದಲ್ಲಿ ಪೈಸಾರಿ ಜಾಗ ಒತ್ತುವರಿಯಾಗಿದೆ. ಅಂಗನವಾಡಿಗೆ ಕಟ್ಟಡ ಕಟ್ಟಲು ಜಾಗ ಇಲ್ಲದಂತಾಗಿದೆ ಎಂದು ಸದಸ್ಯರು ದೂರಿದರು. ಶನಿವಾರಸಂತೆ ಹೆಮ್ಮನೆ ಗ್ರಾಮದಲ್ಲಿ ಎಷ್ಟು ಪೈಸಾರಿ ಜಾಗವಿತ್ತು. ಒತ್ತುವರಿ ಮಾಡಿಕೊಂಡವರ ಪಟ್ಟಿ, ಉಳಿದಿರುವ ಪೈಸಾರಿ ಜಾಗ ಎಷ್ಟಿದೆ ಎಂಬ ಮಾಹಿತಿಯನ್ನು ಕೂಡಲೇ ನೀಡುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು.

    ಕಂದಾಯ ಇಲಾಖೆಯಲ್ಲಿ ಎಸ್ಸಿ, ಎಸ್ಟಿಗಳ ಅರ್ಜಿಗಳು ಧೂಳು ತಿನ್ನುತ್ತಿವೆ. ನಮ್ಮ ಕೆಲಸಗಳು ಆಗುತ್ತಿಲ್ಲ. ಆಸ್ತಿವಂತರ ದುರಸ್ತು ಕಡತಗಳು ವಿಲೇವಾರಿಯಾಗುತ್ತಿವೆ ಎಂದು ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ಕೆಂಚೇಶ್ವರ ದೂರಿದರು.

    ಕರ್ಕಳ್ಳಿ ಬಾಣೆಯಲ್ಲಿ ಕಿರಿದಾದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಕೆಲವರು ಕಸವನ್ನು ಸ್ಮಶಾನ ಜಾಗದಲ್ಲಿ ಸುರಿಯುತ್ತಿದ್ದಾರೆ. ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಅಂತ್ಯಕ್ರಿಯೆ ಕಷ್ಟವಾಗುತ್ತಿದೆ. ಅಲ್ಲದೆ ಜಾಗವೂ ಒತ್ತುವರಿಯಾಗಿದೆ ಎಂದು ಎಸ್.ಆರ್.ವಸಂತ್ ದೂರಿದರು. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

    ದೊಡ್ಡಭಂಡಾರ ಗ್ರಾಮದ ಸ್ಮಶಾನ ಜಾಗದ ಹದ್ದುಬಸ್ತು ಸರ್ವೇ ಮಾಡಿಸಿಕೊಡಬೇಕೆಂದು ವೇದಕುಮಾರ್ ಮನವಿ ಮಾಡಿದರು. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಎಸ್.ಸಿ. ಮೀಸಲಾತಿ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ವಿಶೇಷ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸದ ಪಿಡಿಒಗಳ ವಿರುದ್ಧ ಅಟ್ರಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

    ಕೊಡ್ಲಿಪೇಟೆ ಹೋಬಳಿ ಕಂದಾಯ ಇಲಾಖೆಯಲ್ಲಿ 10-20 ವರ್ಷಗಳಿಂದ ಕಂದಾಯ ಅಧಿಕಾರಿಗಳು ಗೂಟ ಹೊಡೆದುಕೊಂಡು ಕುಳಿತಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ನಿಜವಾದ ಎಸ್ಸಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಕ್ರಮ ಎಸಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೇವರಾಜ್ ಒತ್ತಾಯಿಸಿದರು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts