ಶಿವಮೊಗ್ಗ: ಸಮಾಜದಲ್ಲಿ ಕುಕೃತ್ಯ ಮಾಡುವವರು ಕಾಂಗ್ರೆಸ್ಗೆ ಬ್ರದರ್ಗಳು. ಈಗ ಕಾಂಗ್ರೆಸ್ ಮನಸ್ಥಿತಿ ಪೊಲೀಸ್ ಇಲಾಖೆಗೂ ಬಂದಿದೆ. ಜ್ಞಾನವ್ಯಾಪಿ ಮಸೀದಿ ವಿಚಾರದಲ್ಲಿ ಕೋರ್ಟ್ ನೀಡಿದ ತೀರ್ಪನ್ನು ಖಂಡಿಸಿ ರಾಮನಗರದ ಚಾಂದ್ ಪಾಷಾ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ವಕೀಲರು ದೂರು ಸಲ್ಲಿಸಿದರೆ ಅಲ್ಲಿನ ಪೊಲೀಸರು ವಕೀಲರ ವಿರುದ್ಧವೇ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪ್ರಕರಣದ ಬಗ್ಗೆ ಎನ್ಐಎ ತನಿಖೆ ನಡೆಸಬೇಕು ಎಂದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದ್ದಾರೆ.
ಸಬ್ಇನ್ಸ್ಪೆಕ್ಟರ್ ತನ್ವೀರ್ ಅಹಮದ್ ಆರೋಪಿಯ ರಕ್ಷಣೆಗೆ ಮುಂದಾಗಿದ್ದ. ನಮ್ಮ ಪಕ್ಷದಿಂದ ವ್ಯಾಪಕ ಆಕ್ರೋಶ ವ್ಯಕ್ರವಾದ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಅಮಾನತು ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರ ಬದುಕಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಜ್ಞಾನವ್ಯಾಪಿ ಮಸೀದಿ ತೀರ್ಪಿಗೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಧೀಶರನ್ನೇ ಅವಹೇಳನ ಮಾಡಿದ್ದಾನೆ. ಇದಕ್ಕೆ ವಕೀಲರು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ಆರೋಪಿಗೆ ರಕ್ಷಣೆ ನೀಡುವಂತೆ ಕಾಣುತ್ತಿದೆ. ಈ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ರಾಜ್ಯ ಸರ್ಕಾರ ತನ್ನ ರಾಜಕಾರಣ ಬಿಟ್ಟು ತುಷ್ಟೀಕರಣದ ಮಾನಸಿಕತೆಯಿಂದ ಹೊರಬಂದು ರಾಷ್ಟ್ರದ್ರೋಹಿಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ತಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಗೆ ಹೋಗಿ ಪ್ರತಿಭಟಿಸಿದ ಸಿಎಂ ಈಗ ರಾಜ್ಯದ ತೆರಿಗೆ ಹಣವನ್ನು ಕೇರಳದವರಿಗೆ ಪರಿಹಾರವಾಗಿ ನೀಡುತ್ತಿದ್ದಾರೆ. ಕೇರಳದಲ್ಲಿ ವ್ಯಕ್ತಿಯೊಬ್ಬ ರಾಜ್ಯದ ಆನೆ ತುಳಿತದಿಂದ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಕರ್ನಾಟಕದಿಂದ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಆನೆ ತುಳಿತದಿಂದ ಸಾವನ್ನಪಿದ್ದವರ ಕುಟುಂಬಕ್ಕೆ ಗರಿಷ್ಠ 8 ಲಕ್ಷ ರೂ. ಪರಿಹಾರ ನೀಡಿದ ನಿದರ್ಶನಗಳಿವೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವವರು ಎಂಬ ಕಾರಣಕ್ಕೆ ರಾಜ್ಯದಿಂದ 15 ಲಕ್ಷ ರೂ. ನೀಡುತ್ತಿದ್ದಾರೆ. ಕೇರಳದಲ್ಲಿ ಸರ್ಕಾರವಿಲ್ಲವೆ? ರಾಹುಲ್ ಗಾಂಧಿ ಅಲ್ಲಿಂದ ಪರಿಹಾರ ಕೊಡಿಸಲು ಸಾಧ್ಯವಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ ಇದ್ದರು.