ಪಡುಬಿದ್ರಿ: ಕಟಪಾಡಿ ಶಿರ್ವ ರಸ್ತೆ ಬಳಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದ ಒಡಿಶಾ ಮೂಲದ ಕಾರ್ಮಿಕ ಗಣೇಶ್ ಸೇತಿ(50) ಎಂಬಾತನನ್ನು ರಾಡ್ನಿಂದ ಹೊಡೆದು ಕೊಲೆಗೈದ ಆರೋಪಿ ಅಕನ್ನನ್ನು ಕಾಪು ಪೊಲೀಸರು ಉಡುಪಿ ಬಸ್ ನಿಲ್ದಾಣದಲ್ಲಿ ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.
ಕಾರ್ಮಿಕರಿಬ್ಬರ ನಡುವೆ ಹೊಡೆದಾಟ ನಡೆದು ಕೊಲೆಯಲ್ಲಿ ಅಂತ್ಯವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪತ್ತೆಗೆ ತಂಡ ರಚಿಸಿ ಕಾರ್ಯೋನ್ಮುಖರಾಗಿದ್ದರು. ಆರೋಪಿ ಉಡುಪಿ ಬಸ್ ನಿಲ್ದಾಣದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹೊಡೆದಾಟ ವೇಳೆ ಗಾಯಗೊಂಡಿದ್ದ ಆತನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.