ಬೆಳಗಾವಿ: ರಾಷ್ಟ್ರ ಮರುನಿರ್ಮಾಣ ಎಂಬ ತತ್ತ್ವ ಇಟ್ಟುಕೊಂಡು ಜನ್ಮ ತಾಳಿದ ಎಬಿವಿಪಿ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ.ಆನಂದ ಹೊಸೂರ ಹೇಳಿದ್ದಾರೆ.
ನಗರದ ಗೋಮಟೇಶ ವಿದ್ಯಾಪೀಠದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಾನಗರ ವಿದ್ಯಾರ್ಥಿ ನಾಯಕರ ಸಭೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯೊಂದಿಗೆ ಎಬಿವಿಪಿ ಏಳು ದಶಕಗಳಿಂದ ದೇಶದ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತ ಸಂಘಟನೆಯಾಗಿದೆ ಎಂದರು.
ರಾಜ್ಯ ಸಹ ಕಾರ್ಯದರ್ಶಿ ಸವಿತಾ ಕುಂಬಾರ ಮಾತನಾಡಿ, ಎಬಿವಿಪಿ ಶೈಕ್ಷಣಿಕ ಕ್ಷೇತ್ರ ಅಷ್ಟೇ ಅಲ್ಲ. ಸಾಮಾಜಿಕವಾಗಿಯೂ ಸೇವೆ ಸಲ್ಲಿಸುತ್ತಿದೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದೆ. ಲಾಕ್ಡೌನ್ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಜನರಿಗೆ ಉಚಿತವಾಗಿ ನೀಡಿದ್ದು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು.
ಎಬಿವಿಪಿ ವಿಭಾಗ ಪ್ರಮುಖ ಡಾ.ಎಚ್.ಎಂ.ಚನ್ನಪ್ಪಗೋಳ, ಜಿಲ್ಲಾ ಪ್ರಮುಖ ಪ್ರವೀಣ್ ಪ್ಯಾಟಿ, ವಿಭಾಗ ಸಂಚಾಲಕ ರೋಹಿತ್ ಉಮನಾಬಾದಿಮಠ, ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ಜಂಗೋಣಿ, ಪ್ರೊ. ಸಂದೀಪ್ ನೈರ್, ಪ್ರೊ. ಸುಶಾಂತ್ ಜೋಶಿ ಉಪಸ್ಥಿತರಿದ್ದರು.
ಎಬಿವಿಪಿ ನಗರ ಅಧ್ಯಕ್ಷರಾಗಿ ಡಾ. ಎಸ್.ವಿ.ಗೋರಬಾಳ, ಉಪಾಧ್ಯಕ್ಷರಾಗಿ ವಂದನಾ ಸೇಠ್, ಮುರುಘೇಶ ಜಂಬಗಿ, ರಾಜು ಅಂಗಡಿ, ನಗರ ಕಾರ್ಯದರ್ಶಿ ಕಿರಣ ದುಖಾನದಾರ, ಸಹ ಕಾರ್ಯದರ್ಶಿ ರಿತಿಕಾ ಹೆಗ್ಡೆ, ಗುರುರಾಜ, ಸುನೀ ಇಟ್ನಾಳ, ನಗರ ವಿದ್ಯಾರ್ಥಿನಿ ಪ್ರಮುಖ ಅಶ್ವಿನಿ ಕಂಚಿ, ಸಹ ವಿದ್ಯಾರ್ಥಿನಿ ಪ್ರಮುಖ ಪ್ರಜ್ಞಾ ಮತ್ತು ಗೌರಿ, ನಗರ ಕಾನೂನು ವಿದ್ಯಾರ್ಥಿ ಪ್ರಮುಖ ಕೃಷ್ಣ ಜೋಶಿ, ಸಹ ಪ್ರಮುಖ ಮಂಜುನಾಥ ಭೀರಣ್ಣವರ, ನಗರ ಎಸ್.ಎಫ್.ಡಿ. ಪ್ರಮುಖ ಶುಭಂ, ಸಹ ಪ್ರಮುಖ ರೇಣಯ್ಯ ಹಿರೇಮಠ, ನಗರ ಕಾರ್ಯಕ್ರಮ ಪ್ರಮುಖ ಸುಹಾಸಿನಿ ಕುರಣಿ ಹಾಗೂ ಇತರರಿಗೆ ನೂತನ ಜವಾಬ್ದಾರಿ ವಹಿಸಿಕೊಡಲಾಯಿತು.