ವಿಜಯಪುರ: ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಏಕ ರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೆ ತರುವಂತೆ ಅಗ್ರಹಿಸಿ ಎಬಿವಿಪಿ ನಿಯೋಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸೋಮವಾರ ನಡೆದ 15 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗ, ಏಕರೂಪ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ವೇಳಾಪಟ್ಟಿ ಜಾರಿಗೊಳಿಸಬೇಕೆಂದು ಆಗ್ರಹಿಸಿತು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಶೈಕ್ಷಣಿಕ ದುಂಡು ಮೇಜಿನ ಸಭೆಯು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಿತು. ಈ ಸಭೆಯಲ್ಲಿ ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪ್ರವೇಶಾತಿ- ಪರೀಕ್ಷೆ-ಫಲಿತಾಂಶಗಳ ಕುರಿತು ಸುದೀರ್ಘವಾದ ಚರ್ಚೆ ನಡೆಯಿತು. ಆ ಚರ್ಚೆಯ ಭಾಗವಾಗಿ ಅನೇಕ ನಿರ್ಧಾರ ಕೈಗೊಳ್ಳಲಾಗಿದ್ದು, ಅವುಗಳ ಅನುಷ್ಟಾನಕ್ಕೆ ಸರ್ಕಾರ ಮುಂದಾಗಬೇಕೆಂದರು.
ವಿಭಾಗ ಸಹ ಪ್ರಮುಖ ಡಾ. ಅಮೀತಕುಮಾರ ಬಿರಾದಾರ ಮಾತನಾಡಿ, ಏಕರೂಪ ವೇಳಾಪಟ್ಟಿಯನ್ವಯ ಪರೀಕ್ಷೆ ನಡೆಸಿ ತ್ವರಿತವಾಗಿ ಫಲಿತಾಂಶ ಪ್ರಕಟಿಸಬೇಕು. ಸಕಾಲಕ್ಕೆ ಅಂಕಪಟ್ಟಿ ನೀಡಬೇಕು. ವಿದ್ಯಾರ್ಥಿ ವೇತನ, ಹೊಸ ಪ್ರವೇಶಾತಿ ಹಾಗೂ ಹೊಸ ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲಿಯಾವುದೇ ತೊಂದರೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದರು.
ಪ್ರಮುಖರಾದ ಸಿದ್ದು ಪತ್ತಾರ, ಕವಿತಾ ಬಿರಾದಾರ, ಹಣಮಂತ ಬಗಲಿ, ಮಲ್ಲಿಕಾರ್ಜುನ ಮಾಳಿ, ಅಭಿಷೇಕ ಬಿರಾದಾರ, ಮಂಜುನಾಥ ಹಳ್ಳಿ, ಪೂಜಾ ವೀರಶೆಟ್ಟಿ ಮತ್ತಿತರರಿದ್ದರು.