More

    ಭಾಷೆಯ ಮೂಲಕ ವಿಶ್ವ ಬಂಧುತ್ವದ ಪಸರಿಸುವುದು ಅಗತ್ಯ- ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳೂರು ಶಾರದ ವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರುತಿ ಎಸ್.ಭಟ್

    ಪುತ್ತೂರು: ನಮ್ಮ ಜೀವನದಲ್ಲಿ ಭಾಷೆ ಎಂಬುದು ಮುಖ್ಯ. ಭಾಷೆ ಇಲ್ಲದಿದ್ದರೆ ನಾವೆಲ್ಲರೂ ಮೂಕರಂತೆ ವರ್ತಿಸಬೇಕಾಗುತ್ತಿತ್ತು. ಆದ್ದರಿಂದ ಭಾಷೆಗೆ ಮಹತ್ವವನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಭಾಷೆಯ ಮೂಲಕ ವಿಶ್ವ ಬಂಧುತ್ವದ ಭಾವನೆಯನ್ನು ಪಸರಿಸಬೇಕು. ಸಿಹಿಯಾದ ಮಾತನ್ನು ಆಡುವಾಗ ನುಡಿದವರಿಗೂ, ಕೇಳುಗರಿಗೂ ಹಿತವೆನಿಸುತ್ತದೆ ಎಂದು ಮಂಗಳೂರು ಶಾರದ ವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರುತಿ ಎಸ್.ಭಟ್ ಹೇಳಿದರು.
    ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಆಯೋಜಿಸಲಾದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ರಾಷ್ಟ್ರಭಾಷೆ ಎನಿಸಿಕೊಂಡಿರುವ ಹಿಂದಿ ಭಾಷೆಯು ಸುಂದರ, ಸುಮಧುರ, ಏಕತೆಯ ಹಾಗೂ ಸಂಪರ್ಕ ಬೆಸೆಯುವ ಭಾಷೆಯಾಗಿದೆ ಎಂದರಲ್ಲದೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅಂಕ ಗಳಿಸುವುದಷ್ಟೇ ಅಲ್ಲ, ಜತೆಗೆ ಜೀವನದಲ್ಲಿ ನಾವು ಒಳ್ಳೆಯ ಮೌಲ್ಯ ಗಳನ್ನು ಅಳವಡಿಸಿಕೊಳ್ಳಬೇಕು. ಗುರುಗಳು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಾರೆ. ಅದರಂತೆ ನಡೆದು ಸಾಧನೆಯನ್ನು ಸಾರಬೇಕು ಎಂದರು.
    ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಏಕತೆಗೆ ಭಾಷೆಯ ಅವಶ್ಯಕತೆ ಇದೆ, ಹಿಂದಿ ಭಾಷೆ ಈ ರೀತಿ ದೇಶದ ಏಕತೆಯನ್ನು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಎಲ್ಲೆಲ್ಲಿ ಹಿಂದಿ ಭಾಷೆಯು ಶಿಥಿಲಗೊಂಡು, ಬೇರು ಕಳೆದುಕೊಳ್ಳುತ್ತಿದೆಯೋ ಅಲ್ಲಿ ಭಾರತವು ವಿಭಜನೆಯಾಗುತ್ತಿದೆ ಎಂದರು.
    ಹಿಂದಿ ದಿವಸದ ಸಲುವಾಗಿ ಹಮ್ಮಿಕೊಳ್ಳಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲೆ ಮಾಲತಿ.ಡಿ ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್, ಹಿಂದಿ ಶಿಕ್ಷಕಿಯರಾದ ಶ್ರುತಿ ನಾಯಕ, ಹಾಗೂ ಕುಸುಮಾ ಉಪಸ್ಥಿತರಿದ್ದರು.
    ವಿದ್ಯಾರ್ಥಿಗಳಾದ ಅಭಿನವ್ ಹಾಗೂ ಸ್ವಸ್ತಿಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೇಷ್ಠ ಸ್ವಾಗತಿಸಿ, ಮನಸ್ವಿತ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts