ಬೆಂಗಳೂರು: ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಅಂತಾರೆ. ಆದರೆ ಇಲ್ಲೊಬ್ಬ ಮಹಿಳೆ ಒಂದೇ ಒಂದು ಸುಳ್ಳು ಹೇಳಿದ್ದಕ್ಕೆ ದುರಂತ ಅಂತ್ಯ ಕಂಡಿದ್ದಾಳೆ. ಅದೂ ಮದ್ವೆಯಾದ ಒಂದು ವರ್ಷವೂ ಆಗಿಲ್ಲ, ಗಂಡನಿಂದಲೇ ಕೊಲೆಯಾಗಿದ್ದಾಳೆ! ಅಷ್ಟಕ್ಕೂ ಆಕೆ ಹೇಳಿದ ಸುಳ್ಳು ಹೇಳಿದ್ದು ವಯಸ್ಸಿನ ಬಗ್ಗೆ…
ಹೌದು, ಇಂತಹ ವಿಚಿತ್ರ ಪ್ರಕರಣ ಬೆಂಗಳೂರಲ್ಲಿ ನಡೆದಿದೆ. ನಿಜವಾದ ವಯಸ್ಸನ್ನು ಮುಚ್ಚಿಟ್ಟು ಸುಳ್ಳು ಹೇಳಿ ಮದ್ವೆಯಾದಾಕೆಯನ್ನು ಬೇಸತ್ತು ಗಂಡನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ, ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಹೈಡ್ರಾಮ ಮಾಡಿದ್ದ. ತನಿಖೆ ಶುರು ಮಾಡುತ್ತಿದ್ದಂತೆ ಆತನ ಅಸಲಿ ಮುಖ ಬಯಲಾಗಿದೆ.
ಏನಿದು ಪ್ರಕರಣ?: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ ಪೃಥ್ವಿರಾಜ್, ತನ್ನ ಸ್ವಗ್ರಾಮ ಸಮೀಪದ ಜ್ಯೋತಿಕುಮಾರಿ ಎಂಬಾಕೆಯನ್ನು ಹಿರಿಯರ ಸಮ್ಮುಖದಲ್ಲಿ 9 ತಿಂಗಳ ಹಿಂದೆ ಮದ್ವೆಯಾಗಿದ್ದ. 5 ತಿಂಗಳ ಹಿಂದಷ್ಟೇ ಪತ್ನಿ ಜತೆ ಬೆಂಗಳೂರಿಗೆ ಆಗಮಿಸಿದ ಪೃಥ್ವಿ ಬೆಂಗಳೂರಿನ ಬಿಟಿಎಂ ಲೇಔಟ್ನ ಮಾರುತಿ ನಗರದಲ್ಲಿ ವಾಸವಿದ್ದ. ಆಗಸ್ಟ್ 3ರಂದು ಪತ್ನಿ ನಾಪತ್ತೆಯಾಗಿದ್ದಾಳೆ, ಆಕೆಯನ್ನು ಹುಡುಕಿ ಕೊಡಿ ಎಂದು ಮಡಿವಾಳ ಪೊಲೀಸ್ ಠಾಣೆಗೆ ಗಂಡ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ಜ್ಯೋತಿ ಬದುಕಿಲ್ಲ ಎಂಬ ಕಟು ಸತ್ಯ ಬಯಲಾಗುತ್ತೆ.
ಪೃಥ್ವಿರಾಜ್ಗೆ 30 ವರ್ಷ ವಯಸ್ಸು. ಮದ್ವೆ ವೇಳೆ ಜ್ಯೋತಿ, ತನ್ನ ವಯಸ್ಸು 28 ಎಂದು ಹೇಳಿದ್ದಳಂತೆ. ಮದ್ವೆಯಾದ ಕೆಲ ತಿಂಗಳಿಗೆ ಪತ್ನಿಯ ನಿಜವಾದ ವಯಸ್ಸು 38 ವರ್ಷ ಎಂದು ಗಂಡನಿಗೆ ಗೊತ್ತಾಗಿದೆ. ಹೀಗಾಗಿ ಮನೆಯಲ್ಲಿ ಜಗಳ ಶುರುವಾಗಿತ್ತು. ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಮದ್ವೆಯಾಗಿದ್ದಕ್ಕೆ ಜಿಗುಪ್ಸೆಗೊಂಡ ಪತಿ, ಆಕೆಯನ್ನ ಮುಗಿಸಲು ಸಂಚು ರೂಪಿಸಿದ್ದ. ಅದರಂತೆ ಆಕೆಯನ್ನು ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಕರೆದೊಯ್ದಿದ್ದ. ತನ್ನ ಸ್ನೇಹಿತ ಸಮೀರ್ ಎಂಬಾತನನ್ನು ಕಾರು ಚಾಲಕ ಎಂದು ಜತೆಗೆ ಕರೆದೊಯ್ದಿದ್ದ. ತನ್ನ ಪ್ಲ್ಯಾನ್ ಪ್ರಕಾರ ಸಕಲೇಶಪುರದಲ್ಲಿ ಆಕೆಯ ಕುತ್ತಿಗೆಗೆ ವೇಲ್ನಿಂದ ಬಿಗಿದು ಕೊಲೆ ಮಾಡಿ ಶವವನ್ನು ಎಸೆದು ಬಂದಿದ್ದ.
ಬೆಂಗಳೂರಿಗೆ ಬಂದು ಏನೂ ಅರಿಯದಂತೆ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಜ್ಯೋತಿ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಳು. ಆರೋಪಿಗಳಾದ ಪೃಥ್ವಿರಾಜ್ ಮತ್ತು ಸಮೀರ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
KRS ಡ್ಯಾಂ ಮೇಲೆ ಫೋಟೋಶೂಟ್ ಮಾಡಿಸಿದ ಸಂಸದೆ ವಿರುದ್ಧ ಶಾಸಕ ಗರಂ! ಕಾನೂನು ಎಲ್ಲರಿಗೂ ಒಂದೇ ಕ್ರಮ ಕೈಗೊಳ್ಳಿ…
ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ: ವಿಡಿಯೋ ಸಹಿತ BJPಗೆ ಭದ್ರಾವತಿ ಶಾಸಕ ತಿರುಗೇಟು