ಅಂಕೋಲಾ: ಪಶು ಆಸ್ಪತ್ರೆಗೆ ಔಷಧ ಸಾಗಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಔಷಧ ಸುಟ್ಟು ಕರಕಲಾದ ಘಟನೆ ಬುಧವಾರ ಮಧ್ಯಾಹ್ನ ಶಾಂತಿ ಸಾಗರ ಹೋಟೆಲ್ ಪಕ್ಕದ ಚತುಷ್ಪಥ ಹೆದ್ದಾರಿಯಲ್ಲಿ ನಡೆದಿದೆ.
ಕಾರವಾರ ಪಶು ವೈದ್ಯಕೀಯ ಉಪನಿರ್ದೇಶಕರ ಕಚೇರಿಯಿಂದ ಹೊನ್ನವಾರಕ್ಕೆ ಔಷಧ ಸಾಮಗ್ರಿ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನಿಲ್ಲಿಸಿ ಚಾಲಕ ಊಟಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ವಾಹನದಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಚಾಲಕ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿ, ಔಷಧವನ್ನು ರಕ್ಷಣೆ ಮಾಡಿದರು.