ತುಮಕೂರು: ಗುಬ್ಬಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರೂ ಆದ ಪಪಂ ಮಾಜಿ ಉಪಾಧ್ಯಕ್ಷ ಜಿ.ಸಿ.ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿ ಅವರ ಕೊಲೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಮಧ್ಯಾಹ್ನ ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ನರಸಿಂಹಮೂರ್ತಿ (50) ಕೊಲೆಯಾಗಿದ್ದರು. ಪ್ರತಿನಿತ್ಯ ಟೀ ಅಂಗಡಿ ಬಳಿ ಕುಳಿತು ದಲಿತರು, ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದ ಜಿ.ಸಿ.ನರಸಿಂಹಮೂರ್ತಿ ಎಂದಿನಂತೆ ಟೀ ಅಂಗಡಿ ಮುಂದೆ ಕುಳಿತಿದ್ದಾಗ ಕಾರಿನಲ್ಲಿ ಬಂದ ಐದಾರು ಮಂದಿ ದುಷ್ಕಮಿರ್ಗಳ ತಂಡ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು.
ವ್ಯವಸ್ಥಿತ ಸಂಚು ರೂಪಿಸಿ ದಾಳಿ ನಡೆಸಿ ತಲೆ ಮತ್ತು ಮುಖದ ಚಹರೆ ಗುರುತು ಸಿಗದಂತೆ ಹಲ್ಲೆ ನಡೆಸಿ ಬಲಗೈ ತುಂಡರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದು ಗುಬ್ಬಿ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಳೇದ್ವೇಷ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ವಾಡ್, ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿದ್ದೇವೆ. ಸಾಕ್ಷ್ಯಾಧಾರಗಳ ಮೇಲೆ ಪೊಲೀಸ್ ವಶಕ್ಕೆ ಪಡೆದಿದ್ದೇವೆ. ವಿವಿಧ ಆಯಾಮಗಳಲ್ಲಿ ತನಿಖೆಗೆ ಒಳಪಡಿಸಿದ್ದೇವೆ. ಇದರಲ್ಲಿ ಯಾರ ಪಾತ್ರ ಇದೆ? ಯಾಕೆ ಕೊಲೆ ಮಾಡಿದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ, ಕೊಲೆಗೆ ನಿಖರ ಮಾಹಿತಿ ಸಿಕ್ಕಿಲ್ಲ, ತನಿಖೆ ಬಳಿಕ ಬಹಿರಂಗ ಪಡಿಸುತ್ತೇವೆ. ಸ್ಥಳೀಯರು ಹಾಗೂ ಕೆಲ ಹೊರಗಿನವರನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದೇವೆ. ಮುಖ್ಯಸಾಕ್ಷ್ಯ ಲಭ್ಯವಾಗಿದೆ. ಸಂಪೂರ್ಣವಾಗಿ ತನಿಖೆ ಮಾಡಿ ಆರೋಪಿಗಳು ಯಾರೆಂದು ಹೇಳುತ್ತೇವೆ ಎಂದು ವಿವರಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ನರಸಿಂಹಮೂರ್ತಿ ಮೃತದೇಹವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಗುಬ್ಬಿ ಪಟ್ಟಣದ ಎ.ಕೆ ಕಾಲನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಿರಣ್, ಧೀರಜ್, ಬಸವರಾಜ್, ಫಯಾಜ್ ಸೇರಿ ಐವರನ್ನ ತಿಪಟೂರು ಬಳಿ ಬುಧವಾರ ರಾತ್ರಿಯೇ ವಶಕ್ಕೆ ಪಡೆದ ಪೊಲೀಸರು ರಾತ್ರಿಯಿಡೀ ತೀವ್ರ ವಿಚಾರಣೆ ನಡೆಸಿದ್ದಾರೆ.