ಕೆ.ಆರ್.ನಗರ: ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸೋಮವಾರ ಭತ್ತದ ಗದ್ದೆಗೆ ನುಗ್ಗಿದ ಪರಿಣಾಮ 18 ಮಂದಿ ಗಂಭೀರ ಗಾಯಗೊಂಡಿದ್ದು, 53 ಜನಕ್ಕೆ ಸಣ್ಣ, ಪುಟ್ಟ ಗಾಯಗಳಾಗಿವೆ.
ಸಾಲಿಗ್ರಾಮದಿಂದ ಚುಂಚನಕಟ್ಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಕೆ.ಆರ್.ನಗರ ಸಾರಿಗೆ ಘಟಕಕ್ಕೆ ಸೇರಿದ ಬಸ್ (ಎಂ-11, ಈ-221) ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಕೆಸ್ತೂರು ಕೊಪ್ಪಲು ಗೇಟ್ ಬಳಿ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಭತ್ತದ ಗದ್ದೆಗೆ ನುಗ್ಗಿದೆ.
ಜವರೇಗೌಡ, ರೇಣುಕಾ, ಲೋಕೇಶ, ಕೀರ್ತನ, ಅಶ್ವಿನಿ, ಮಂಗಳಮ್ಮ, ಮಧುಕುಮಾರ್, ಯೋಗೇಶ, ಧನ್ಯಶ್ರೀ, ಅಶ್ವಿನಿ, ಪ್ರಭಾವತಿ, ಹರ್ಷಿತ, ಮೀನಾ, ರಾಜಯ್ಯ, ಗಣೇಶ, ಚನ್ನಬಸಪ್ಪ, ಗೌರಿ, ಸಿಂಚನ, ಸ್ಫೂರ್ತಿ, ಭೂಮಿಕಾ, ರಾಜು, ಮಂಜುಳಮ್ಮ, ರತನ್ ಕುಮಾರ್, ಪ್ರಭಾವತಿ, ಮೀರಾ, ಅಶೋಕ್, ಜಯಮ್ಮ, ಮುದ್ದಪ್ಪ, ಪವಿತ್ರಾ, ಸೀತಮ್ಮ, ನಾಗರತ್ನಮ್ಮ, ನಿರ್ಮಲಾ, ವಿದ್ಯಾ, ನಾಗೇಂದ್ರ, ಮೋಹನ್, ಕುಮಾರ್, ವರುಣ್, ಶಾಂತಾ, ಹರ್ಷಿತ, ಪ್ರಜ್ವಲ್, ಸ್ವಾಮಿಗೌಡ, ಸುಶೀಲಾ, ಅಕುಲ್, ಲತಾ, ಮಂಜುಳಾ, ನವೀನ್, ಕಿರಣ್, ಕುಮಾರ್, ಸಂತೋಷ್, ಅಭಿಷೇಕ್ ನಾಯಕ, ಸುಭಾಷ್ ಮತ್ತು ಸವಿತಾ ಗಾಯಗೊಂಡಿದ್ದಾರೆ.
ಹತ್ತಾರು ಮಂದಿ ಗಾಯಗೊಂಡು ಚೀರುತ್ತಿದ್ದ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಂದ ಶ್ರೀರಾಮಪುರ ಮತ್ತು ಕೆಸ್ತೂರು ಗೇಟ್ ಗ್ರಾಮಸ್ಥರು ಹಾಗೂ ದಾರಿ ಹೋಕರು ತಮ್ಮ ಸ್ವಂತ ವಾಹನಗಳಲ್ಲಿ ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್.ನಗರ ಠಾಣೆಯ ಪಿಎಸ್ಐ ರಂಗಸ್ವಾಮಿ ಮತ್ತು ಮುಖ್ಯ ಪೇದೆಗಳಾದ ಎ.ಕೆ.ಸ್ವಾಮೀಗೌಡ, ರಾಮಚಂದ್ರ ಮತ್ತು ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಪಿ.ಮಹೇಶ್ ಹಾಗೂ ಇತರರು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕರೆಯಿಸಿ ನೆರವಾದರು.
ಗಂಭೀರವಾಗಿ ಗಾಯಗೊಂಡು ಮೂಳೆ ಮುರಿತಕ್ಕೆ ಒಳಗಾಗಿದ್ದ ನಿರ್ವಾಹಕ ಗಂಗಾಧರ್, ಪ್ರಯಾಣಿಕರಾದ ದಿವ್ಯಾ, ಅಶೋಕ್, ಮಂಜು, ಸೀತಮ್, ಶಾಂತಾ, ಸವಿತಾ, ನಿರ್ಮಲಾ, ನಾಗರತ್ಮಮ್ಮ, ಪ್ರಸನ್ನಕುಮಾರ್, ಮುದ್ದಪ್ಪ, ನವೀನ, ಮಂಜುಳಾ, ಪವಿತ್ರಾ, ಹರ್ಷಿತಾ ವರುಣಾ ಮತ್ತು ಜಯಮ್ಮ ಅವರಿಗೆ ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು.