ಬೆಂಗಳೂರು: ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್, ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣಪೀಠ ಮಧ್ಯಂತರ ಆದೇಶ ನೀಡಿದ್ದರೂ ಇಂದು(ಸೋಮವಾರ) ರಾಜ್ಯದ ಕೆಲವೆಡೆ ಮುಸ್ಲಿಂ ಶಿಕ್ಷಕಿಯರೇ ಹಿಜಾಬ್ ಧರಿಸಿ ಶಾಲೆಗೆ ಬಂದ ಘಟನೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಬಂದರೆ, ಶಿಕ್ಷಕಿಯೊಬ್ಬರು ಹಿಜಾಬ್ ಧರಿಸಿ ಬಂದು ಒಡಾಟ ನಡೆಸಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಸಿದ್ದರು. ಹೈಕೋರ್ಟ್ನ ಮಧ್ಯಂತರ ಆದೇಶವಿದೆ, ಶಾಲೆಯೊಳಗೆ ಹಿಜಾಬ್ ಹಾಕಬೇಡಿ ಎಂದು ಶಾಲೆಯ ಮುಖ್ಯಶಿಕ್ಷಕರು ಹೇಳಿದರೂ ಆ ಶಿಕ್ಷಕಿ ಕೇಳಲಿಲ್ಲ. ಹಿಜಾಬ್ ತೆಗೆಯದ ಹಿನ್ನೆಲೆ ಶಿಕ್ಷಕಿಯನ್ನ ರಜೆ ಮೇಲೆ ಆಡಳಿತ ಮಂಡಳಿ ಮನೆಗೆ ಕಳಿಸಿತು.
ಮಂಡ್ಯ ನಗರದ ರೋಟರಿ ವಿದ್ಯಾಸಂಸ್ಥೆಗೆ ಬುರ್ಕಾ ಹಾಕಿಕೊಂಡು ಬಂದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಗೇಟ್ನಲ್ಲೇ ತಡೆಯಿತು. ಹೈಕೋರ್ಟ್ ಮಧ್ಯಂತರ ಆದೇಶದ ಅನುಸಾರ ಬುರ್ಕಾ ತೆಗೆದು ಶಾಲೆ ಒಳಹೋಗುವಂತೆ ಸೂಚಿಸಿದರು. ಬಳಿಕ ಆ ಶಿಕ್ಷಕಿ ಗೇಟ್ನಲ್ಲೇ ಬುರ್ಕಾ ತೆಗೆದು ಒಳಹೋದರು.
ಕಲಬುರಗಿಯಲ್ಲೂ ಶಾಲಾ ಶಿಕ್ಷಕಿಯರು ಹಿಜಾಬ್ ಧರಿಸಿಕೊಂಡೇ ಬಂದು ಸ್ಟಾಫ್ ರೂಂನಲ್ಲಿ ಕುಳಿತಿದ್ದ ದೃಶ್ಯ ಕಂಡು ಬಂತು. ರಾಯಚೂರು ನಗರದ ಪೋರ್ಟ್ ಪ್ರೌಢಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ತೆಗೆದು ಕುಳಿತರು. ಆದರೆ, ಶಿಕ್ಷಕಿ ಮಾತ್ರ ಹಿಜಾಬ್, ಬುರ್ಕಾ ಧರಿಸಿಯೇ ಪಾಠ ಮಾಡಿದರು.
ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ನಿಷೇಧಿಸಿ ಹೊರಡಿಸಿದ್ದ ಸರ್ಕಾರದ ಆದೇಶ ರದ್ದು: ಹೈಕೋರ್ಟ್