ಶಿವಮೊಗ್ಗ: ಅವಿವಾಹಿತ ಯುವತಿಯೊಬ್ಬಳು ಗಂಡು ಮಗುವಿಗೆ ಜನ್ಮಕೊಟ್ಟೆರಡು ತಾಸಿನಲ್ಲೇ ಮೃತಪಟ್ಟಿದ್ದು, ತಾಯಿಗೂ ಮೊದಲೇ ಆ ಹಸುಗೂಸು ಕೂಡ ಹುಟ್ಟುತ್ತಲೇ ಕೊನೆಯುಸಿರೆಳೆದ ಕರುಣಾಜಕನ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಆ ಮಗುವಿನ ತಂದೆ ಯಾರು? ಎಂಬ ಪ್ರಶ್ನೆಯೊಂದಿಗೆ ಈ ಪ್ರಕರಣವೀಗ ತ್ರಿಕೋನ ಪ್ರೇಮಕಥೆಗೆ ತಿರುಗಿದೆ.
ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಮೃತ ಯುವತಿ. ಈಕೆ ಆಯನೂರಿನಲ್ಲಿ ಓದುವಾಗ ಆಯನೂರು ಸಮೀಪದ ಗ್ರಾಮದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕಡುಬಡತನ ಇದ್ದಿದ್ದರಿಂದಾಗಿ ಉದ್ಯೋಗ ಅರಸಿ ಮೈಸೂರಿಗೆ ತೆರಳಿದ್ದಳು. ಅಲ್ಲಿ ಅಶ್ವಿನಿಗೆ ಬಸವರಾಜ್ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಕಾಲಕ್ರಮೇಣ ಅಶ್ವಿನಿಗೆ ಪ್ರೇಮಾಂಕುರವಾಗಿತ್ತು. ಇದೇ ವೇಳೆಗೆ ಕರೊನಾ ಲಾಕ್ಡೌನ್ ಆಗಿದ್ದರಿಂದಾಗಿ ಅಶ್ವಿನಿ ಸ್ವಗ್ರಾಮಕ್ಕೆ ಬಂದಿದ್ದಳು. ಕುಂಸಿಗೆ ಬರುವಾಗ ತನ್ನೊಂದಿಗೆ ಬಸವರಾಜನನ್ನೂ ಕರೆದುಕೊಂಡು ಬಂದಿದ್ದಳು. ಬಸವರಾಜ್ ಬಗ್ಗೆ ಮನೆಯವರು ವಿಚಾರಿಸಿದಾಗ ಆತ ನನ್ನ ಸ್ನೇಹಿತ. ಲಾಕ್ಡೌನ್ ಹಿನ್ನೆಲೆಯಲ್ಲಿ ನನ್ನೊಂದಿಗೆ ಬಂದಿದ್ದಾನೆ, ಕೆಲ ದಿನದಲ್ಲೇ ಮತ್ತೆ ಮೈಸೂರಿಗೆ ಹೋಗುತ್ತಾನೆ ಎಂದಿದ್ದಳು. ಆದರೆ, ಮನೆಯವರು ಬಸವರಾಜ್ ಬಗ್ಗೆ ಪದೇಪದೆ ಪ್ರಶ್ನೆ ಮಾಡಲಾರಂಭಿಸಿದಾಗ 15 ದಿನಕ್ಕೇ ಬಸವರಾಜ್ ವಾಪಸ್ ಮೈಸೂರಿಗೆ ತೆರಳಿದ್ದ.
ಬಸವರಾಜ್ ಮೈಸೂರಿಗೆ ತೆರಳಿದ ಕೆಲದಿನಗಳ ಬಳಿಕ ಅಶ್ವಿನಿಯ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಆಗ ಅಶ್ವಿನಿ ಆಸ್ಪತ್ರೆಗೆ ಹೋಗಿ ಬರಲಾರಂಭಿಸಿದ್ದಳು. ಇದೇ ವೇಳೆಗೆ ಅಶ್ವಿನಿ ಹೊಟ್ಟೆಯೂ ಊದಿಕೊಳ್ಳಲಾರಂಭಿಸಿತ್ತು. ಈ ಬಗ್ಗೆ ಪಾಲಕರು ವಿಚಾರಿಸಿದಾಗ ಗ್ಯಾಸ್ಸ್ಟ್ರಿಕ್ ಸಮಸ್ಯೆ ಇದೆ, ಕೆಲ ದಿನಗಳಲ್ಲೇ ಸರಿಹೋಗುತ್ತೆ ಎಂದಿದ್ದಳು. ಮಗಳ ಮಾತನ್ನು ಪಾಲಕರು ನಂಬಿ ಬಿಟ್ಟಿದ್ದರು. ಸೆ.12ರಂದು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಶ್ವಿನಿಯನ್ನು ಪಾಲಕರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ತಪಾಸಣೆ ಮಾಡಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ. ಹೊಟ್ಟೆ ನೋವು ಹೆಚ್ಚಾಗಿ ಇದೇ ವೇಳೆ ಹೆರಿಗೆ ಆಗಿತ್ತು. ಅವಧಿ ಪೂರ್ವ ಜನನವಾಗಿದ್ದರಿಂದ ಮಗು ಬದುಕಲಿಲ್ಲ. ಮಗು ಮೃತಪಟ್ಟ ಎರಡು ಗಂಟೆಯಲ್ಲೇ ಅಶ್ವಿನಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.
ತಾಯಿ ಹಾಗೂ ಹಸುಗೂಸು ಇಬ್ಬರೂ ಮೃತಪಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಅಶ್ವಿನಿ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಪ್ರಶ್ನೆ ಎದುರಾಯಿತು. ಅಶ್ವಿನಿ ಆರಂಭದಲ್ಲಿ ಮಧುಸೂದನ ಎಂಬಾತನ್ನು ಪ್ರೀತಿಸುತ್ತಿದ್ದಳು. ಬಳಿಕ ಬಸವರಾಜನನ್ನು ಪ್ರೀತಿಸಲಾರಂಭಿಸಿದ್ದಳು. ಲಾಕ್ಡೌನ್ ಸಮಯದಲ್ಲಿ ಅಶ್ವಿನಿ ಊರಿನಲ್ಲೇ ಇದ್ದಿದ್ದರಿಂದ ಮಧುಸೂದನನ್ನೂ ಭೇಟಿಯಾಗಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ವಿಧದಲ್ಲೂ ವಿಚಾರಣೆ ಆರಂಭಿಸಿದ್ದಾರೆ. ಈಗಾಗಲೇ ತಾಯಿ ಹಾಗೂ ಹಸುಗೂಸಿನ ಮಾದರಿಗಳನ್ನು ಬೆಂಗಳೂರಿನ ಎಫ್ಎಸ್ಎಲ್ ಲ್ಯಾಬ್ಗೆ ಕಳುಹಿಸಲಾಗಿದೆ. ಈ ಪ್ರಕರಣ ಸಂಬಂಧ ಕಾನೂನು ತೊಡಕು ಉಂಟಾದಲ್ಲಿ ಡಿಎನ್ಎ ಟೆಸ್ಟ್ ಮಾಡಿಸಿ ಮಗುವಿನ ತಂದೆ ಯಾರು? ಎಂದು ಪತ್ತೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. (ದಿಗ್ವಿಜಯ ನ್ಯೂಸ್, ಶಿವಮೊಗ್ಗ)
ಚಿಂತಾಮಣಿಯಲ್ಲಿ ಭೀಕರ ಅಪಘಾತ, 8 ಮಂದಿ ಸಾವು: ಒಬ್ಬೊಬ್ಬರ ಹಿಂದಿದೆ ಕರುಣಾಜನಕ ಕಥೆ
ತುಮಕೂರಲ್ಲಿ ಗಂಡನನ್ನ ಕೊಂದು ಚರಂಡಿಗೆ ಎಸೆದ ಪತ್ನಿ! ಬೆಚ್ಚಿಬೀಳಿಸುತ್ತೆ ಅವಳ ಕ್ರೂರತನ