More

    ಎ.ಎಸ್.ಪೊನ್ನಣ್ಣಗೆ ಸಚಿವ ಸ್ಥಾನ ನೀಡಲು ಒತ್ತಾಯ

    ಮಡಿಕೇರಿ: ವಿರಾಜಪೇಟೆ ಕ್ಷೇತ್ರದ ನೂತನ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಒತ್ತಾಯಿಸಿದ್ದಾರೆ.


    ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಗೆ ಸಚಿವ ಸ್ಥಾನ ದೊರೆಯದೆ ಹಲವು ವರ್ಷಗಳೇ ಕಳೆದಿದೆ. ಸುಮಾರು ೨೦ ವರ್ಷಗಳ ನಂತರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಸಚಿವ ಸಂಪುಟದಲ್ಲಿ ಕೊಡವರೊಬ್ಬರಿಗೆ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದ್ದಾರೆ.


    ಕೊಡಗು ಪುಟ್ಟ ಜಿಲ್ಲೆಯಾದರು ಇಲ್ಲಿಯವರೆಗೆ ನಿರೀಕ್ಷಿತ ಅಭಿವೃದ್ಧಿಯನ್ನು ಕಂಡಿಲ್ಲ. ಜಿಲ್ಲೆಯನ್ನು ಪ್ರತಿನಿಧಿಸಲು ಸಚಿವರು ಕೂಡ ಇರಲಿಲ್ಲ. ಕೊಡಗಿನಲ್ಲಿ ಕೊಡವರ ಪರವಾಗಿ ಪ್ರಭಾವ ಬೀರಲು ಯಾವುದೇ ಮಠ, ಮಂದಿರಗಳಿಲ್ಲ. ಕೊಡವರು ಸೂಕ್ಷ್ಮ ಬುಡಕಟ್ಟು ಜನಾಂಗವಾಗಿದ್ದು, ಕೊಡವರೊಬ್ಬರಿಗೆ ಸಚಿವ ಸ್ಥಾನ ನೀಡುವುದು ಸೂಕ್ತವಾಗಿದೆ. ಜಿಲ್ಲೆಯವರೇ ಸಚಿವರು ಹಾಗೂ ಉಸ್ತುವಾರಿ ಸಚಿವರಾದರೆ ಸ್ಥಳೀಯ ಸಮಸ್ಯೆಗಳನ್ನು ಶೀಘ್ರ ಅರಿತು ಸೂಕ್ತ ಪರಿಹಾರವನ್ನು ತಕ್ಷಣ ಕೈಗೊಳ್ಳಬಹುದಾಗಿದೆ.


    ಕೊಡವರ ಕುಲ ಶಾಸ್ತ್ರ ಅಧ್ಯಯನ, ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು, ಕೊಡವ ಭಾಷೆಯನ್ನು ೮ ನೇ ಶೆಡ್ಯೂಲ್ ಗೆ ಸೇರಿಸುವುದು ಮತ್ತು ದೇವಟ್ ಪರಂಬು ಸ್ಮಾರಕ ನಿರ್ಮಾಣದ ಬೇಡಿಕೆಯನ್ನು ಈಡೇರಿಸಬಹುದಾಗಿದೆ. ಅಲ್ಲದೆ ಇಲ್ಲಿನ ಸುಂದರ ಪರಿಸರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಕೊಡವ ಸಮಾಜಗಳು ಕೂಡ ಪೊನ್ನಣ್ಣ ಅವರ ಪರ ಪ್ರಭಾವ ಬೀರಬೇಕು ಎಂದು ಮನವಿ ಮಾಡಿರುವ ಮನುಮುದ್ದಪ್ಪ, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರಲು ಸಚಿವ ಸ್ಥಾನದಿಂದ ಸಾಧ್ಯವಾಗುವುದರಿಂದ ಭ್ರಷ್ಟಾಚಾರ ಮುಕ್ತ ಮತ್ತು ದಕ್ಷ ಆಡಳಿತ ನೀಡುವ ವಿಶ್ವಾಸವನ್ನು ಮೂಡಿಸಿರುವ ಪೊನ್ನಣ್ಣ ಅವರಿಗೆ ಸರ್ಕಾರ ಮಂತ್ರಿಗಿರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts