ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಜಿಲ್ಲಾಧಿಕಾರಿ ಆಗಿ ಜಿಲ್ಲೆಗೆ ರೋಹಿಣಿ ಸಿಂಧೂರಿ ಬಂದಾಗಿನಿಂದಲೂ ಶಾಸಕ ಸಾ.ರಾ. ಮಹೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಸಿಂಧೂರಿ ವಿರುದ್ಧ ಒಂದಲ್ಲ ಒಂದು ಕಾರಣಕ್ಕೆ ತಗಾದೆ ತೆಗೆಯುತ್ತಲೇ ಇದ್ದರು. ಮುಜರಾಯಿ ಇಲಾಖೆಗೆ ವರ್ಗಾವಣೆ ಆಗಿರುವ ಸಿಂಧೂರಿ ಮೈಸೂರಿಂದ ನಿರ್ಗಮಿಸುವ ವೇಳೆ ಜಿಲ್ಲೆಯಲ್ಲಿನ ಭೂ ಮಾಫಿಯಾ ಬಗ್ಗೆ ಪ್ರಸ್ತಾಪಿಸಿದ್ದರು. ನನಗೆ ಕೆಲವರು ಕೆಲಸ ಮಾಡಲು ಬಿಡಲಿಲ್ಲ ಎಂದೂ ಸುದ್ದಿಗಾರರ ಬಳಿ ಹೇಳಿದ್ದರು. ಈ ಹೇಳಿಕೆ ಖಂಡಿಸಿ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದು, ಸದನದಲ್ಲೂ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಇದೀಗ(ಜೂ.10) ಏಕಾಂಗಿಯಾಗಿ ಪ್ರತಿಭಟನೆಗೆ ಕೂರುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ‘ನನ್ನ ವರ್ಗಾವಣೆ ಹಿಂದಿನ ಷಡ್ಯಂತ್ರ ಏನು’ ಎಂಬುದರ ಕುರಿತು ಸಿಂಧೂರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲೇನಿದೆ: ಮೊದಲ ಬಾರಿಗೆ ಶಾಸಕ ಸಾ.ರಾ.ಮಹೇಶ್ ಮತ್ತು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೆಸರು ಬಳಸಿ ಸಿಂಧೂರಿ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಭೂ ಹಗರಣದಲ್ಲಿ ಭಾಗಿಯಾಗಿರುವ ಆ ಇಬ್ಬರು ವ್ಯಕ್ತಿಗಳಿಂದಲೇ ನನ್ನ ವರ್ಗಾವಣೆಗೆ ಷಡ್ಯಂತ್ರ ನಡೆದಿದೆ. ರಾಜೀವ್ ಮುಡಾ ಅಧ್ಯಕ್ಷರಾದ ಮೇಲೆ ಆದ ತೀರ್ಮಾನಗಳ ಬಗ್ಗೆ ತನಿಖೆಯಾಗಬೇಕು. ಲಿಂಗಾಬುದಿ ಕೆರೆ ಬಳಿ ಭೂಮಿ ಒತ್ತುವರಿ ಮಾಡಿ ನಿರ್ಮಾಣವಾಗುತ್ತಿರುವ ರೆಸಾರ್ಟ್ನಲ್ಲಿ ಆ ಇಬ್ಬರೂ ಪಾಲುದಾರರು. 10 ವರ್ಷದ ಹಿಂದೆ ಇವರು ಎಲ್ಲಿದ್ದರು? ಈಗ ಹೇಗಿದ್ದಾರೆ? ಇವರಿಗೆಲ್ಲ ಇಷ್ಟೊಂದು ಹಣ ಎಲ್ಲಿಂದ ಬರುತ್ತೆ? ಸಾ.ರಾ.ಮಹೇಶ್ ದಾಖಲೆ ಕೇಳಿದಕ್ಕೆ ಕೊಟ್ಟಿದ್ದೇನೆ. ಬೇರೆಯವರು ಕೇಳಿದ್ದರೆ ಅವರ ದಾಖಲೆಯನ್ನೂ ಕೊಡುತ್ತೇನೆ. ಭೂ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೆ ಎಂದು ಸಾ.ರಾ. ಮಹೇಶ್ ಮತ್ತು ರಾಜೀವ್ ವಿರುದ್ಧ ಸಿಂಧೂರಿ ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಯಾದ ದಿನವೇ ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದ್ದು ಎಂಬಂತೆ ಸಿಂಧೂರಿ ಮತ್ತು ಅರುಣ್ ಎಂಬುವರ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಆಕ್ಸಿಜನ್ ದುರಂತ ಘಟನೆ ನಡೆದು 37 ದಿನಗಳ ಬಳಿಕ ವೈರಲ್ ಆದ ಈ ಆಡಿಯೋ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿತ್ತು. ಈ ಆಡಿಯೋ ವೈರಲ್ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರತಿಯೊಂದು ಆಡಿಯೋ ತುಣಕಲ್ಲೂ ತಮಗೆ ಬೇಕಾದ್ದನ್ನು ಮಾತ್ರವೇ ಎಡಿಟ್ ಮಾಡಿಕೊಂಡು ಪ್ರತಿಯೊಂದಕ್ಕೂ ಹೆಸರು ಹಾಕಿ ಆಡಿಯೋ ಫೈಲ್ ರಿಲೀಸ್ ಮಾಡಿದ್ದಾರೆ. ಇದರಲ್ಲಿ ರೋಹಿಣಿ ಸಿಂಧೂರಿಯದ್ದೇ ತಪ್ಪು ಎಂಬಂತೆ ಬಿಂಬಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಇದೀಗ ಸಿಂಧೂರಿ ವರ್ಗಾವಣೆ ಹಿಂದಿನ ಷಡ್ಯಂತ್ರ ಕುರಿತು ಸ್ವತಃ ಸಿಂಧೂರಿಯೇ ಮಾತನಾಡಿರುವ ಆಡಿಯೋ ವೈರಲ್ ಆಗಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ
ಇನ್ನು 4 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಮಹಿಳಾ ಪೊಲೀಸ್ ಕರೊನಾಗೆ ಬಲಿ!
ರೋಹಿಣಿ ಸಿಂಧೂರಿ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…
ಬಾಲಕಿ ಮೇಲೆ ಎದುರು ಮನೆ ಯುವಕನಿಂದ ನಿರಂತರ ಅತ್ಯಾಚಾರ! 4 ತಿಂಗಳ ಬಳಿಕ ಪಾಲಕರಿಗೆ ಕಾದಿತ್ತು ಶಾಕ್
ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್ನೋಟ್ನಲ್ಲಿದೆ ಸಾವಿನ ರಹಸ್ಯ