ಚಿಮ್ಮಡ: ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಅನ್ನದ ಹೆಸರಿನಲ್ಲಿ ನಡೆಯುವ ಪುಣ್ಯದ ಜಾತ್ರೆಯಾಗಿ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿದೆ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಸಿದ್ದರಾಮ ಸ್ವಾಮಿಗಳು ಹೇಳಿದರು.
ಜಂಗಮಕ್ಷೇತ್ರ ಚಿಮ್ಮಡ ಗ್ರಾಮದ ಆರಾಧ್ಯದೈವ ಓಂ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಅಂಗವಾಗಿ ಜ್ಞಾನ ದಾಸೋಹ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಚಿಂತನಗೋಷ್ಠಿ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಕಿಚಡಿ ಪ್ರಸಾದ ಈ ಭಾಗದ ಅನ್ನಬ್ರಹ್ಮ. ಅದರೊಂದಿಗೆ ಇಲ್ಲಿ ಅತ್ಯಮೂಲ್ಯವಾದ ಜ್ಞಾನ ಪ್ರಸಾದವೂ ಲಭಿಸುತ್ತಿದೆ.
ಶರಣರ ದೃಷ್ಟಿಯಲ್ಲಿ ಜ್ಞಾನ ಉಳ್ಳವನೇ ನಿಜವಾದ ಶ್ರೀಮಂತನಾಗಿದ್ದು, ನಿಜವಾದ ಹೋರಾಟ ಮಾಡುವುದಾದರೆ ಜ್ಞಾನ ಸಂಪಾದನೆಗಾಗಿ ಮಾಡಿ ಎಂದರು.ಅಧ್ಯಕ್ಷತೆ ವಹಿಸಿದ್ದ ಮುರಗೋಡದ ನೀಲಕಂಠ ಸ್ವಾಮಿಗಳು ಮಾತನಾಡಿ, ನಾವು ಜಗತ್ತಿನಿಂದ ನಿರ್ಗಮಿಸುವಾಗ ಧರ್ಮ ಮತ್ತು ಕೀರ್ತಿ ಮಾತ್ರ ಹೊತ್ತೊಯ್ಯುತ್ತೇವೆ. ಮಿಕ್ಕಿದ್ದು ಶೂನ್ಯ ಸಮಾನವೆಂದರು.
ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು.
75 ವರ್ಷ ಪೂರೈಸಿರುವ ನೀಲಕಂಠ ಸ್ವಾಮಿಗಳನ್ನು ಸತ್ಕರಿಸಲಾಯಿತು. ಅಥಣಿ ಪ್ರಭು ಚನ್ನಬಸವ ಸ್ವಾಮಿಗಳಿಗೆ ಪ್ರಭು ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಂದಿಗುಂದದ ಶಿವಾನಂದ ಸ್ವಾಮಿಗಳು, ಅಥಣಿಯ ಪ್ರಭು ಚನ್ನಬಸವ ಸ್ವಾಮಿಗಳು, ರಾಮದುರ್ಗದ ಶಾಂತವೀರ ಸ್ವಾಮಿಗಳು, ಕುಂದರಗಿ ಅಮರಸಿದ್ದ ಸ್ವಾಮಿಗಳು, ಶೇಗುಣಸಿ ಮಹಾಂತ ಸ್ವಾಮಿಗಳು, ಸುನಧೋಳಿ ಶಿವಾನಂದ ಸ್ವಾಮಿಗಳು, ಅರಕೇರಿ ಬನಸಿದ್ಧ ಮಹಾರಾಜರು, ಹೊಸೂರಿನ ಪರಮಾನಂದ ಸ್ವಾಮಿಗಳು, ಬನಹಟ್ಟಿಯ ಚನ್ನಬಸವ ಸ್ವಾಮಿಗಳು, ಜನಾರ್ದನ ಮಹಾರಾಜರು, ಅಡವಯ್ಯ ಶಾಸ್ತ್ರೀಗಳು, ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಡಾ. ಎ.ಆರ್. ಬೆಳಗಲಿ, ಡಾ. ಪದ್ಮಜಿತ್ ನಾಡಗೌಡ, ತಹಸೀಲ್ದಾರ್ ಸಂಜಯ ಇಂಗಳೆ ಉಪಸ್ಥಿತರಿದ್ದರು.