ಕೊಚ್ಚಿ: ಶಾಲಾ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪ ಹೊತ್ತಿದ್ದ ವ್ಯಕ್ತಿಗೆ ನ್ಯಾಯಾಲಯವು ಜಾಮೀನು ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಆರೋಪಿ ಸಫಾರ್ ಶಾಗೆ ಕೇರಳ ಹೈಕೋರ್ಟ್ ಬೇಲ್ ನೀಡಿದೆ. ಈ ಪ್ರಕರಣದಲ್ಲಿ ಚಾರ್ಜ್ಶೀಟ್ ದಾಖಲಾಗಿಲ್ಲ ಎಂಬ ಆರೋಪಿ ಪರ ವಕೀಲನ ಮಾತಿಗೆ ಒಪ್ಪಿಗೆ ಸೂಚಿಸಿ ಕೋರ್ಟ್ ಜಾಮೀನು ನೀಡಿದೆ. ಅಲ್ಲದೆ, ಪ್ರಕರಣದ ತನಿಖಾಧಿಕಾರಿಗಳನ್ನು ಚಾರ್ಜ್ಶೀಟ್ ದಾಖಲಿಸಲು ವಿಳಂಬ ಮಾಡಿದ್ದಾರೆಂದು ಟೀಕಿಸಿ, ಇದೊಂದು ಗಂಭೀರವಾದ ಅಪರಾಧ ಎಂದು ಕಿಡಿಕಾರಿದೆ. ವಿಪರ್ಯಾಸವೆಂದರೆ ತನಿಖಾಧಿಕಾರಿಗಳು ಪ್ರಕರಣ ನಡೆದ 90 ದಿನದ ಒಳಗಡೆಯೇ ಚಾರ್ಜ್ಶೀಟ್ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಿಎಸ್ವೈಗೆ ಡಿಕೆಶಿ ಸವಾಲು.. ಅದೂ 24 ಗಂಟೆ ಗಡುವು ವಿಧಿಸಿ!
ಆರೋಪಿ ಸಫಾರ್ ಶಾನನ್ನು ಶಾಲಾ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ಜನವರಿ 8ರಂದು ಬಂಧಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಏಪ್ರಿಲ್ 8ಕ್ಕೂ ಮುಂಚೆಯೇ ಚಾರ್ಜ್ಶೀಟ್ ಅನ್ನು ದಾಖಲಿಸಿದ್ದರು.
ಆದಾಗ್ಯೂ, ಚಾರ್ಜ್ಶೀಟ್ ದಾಖಲಾಗಿದೆ ಎಂಬುದನ್ನು ತಿರಸ್ಕರಿಸಿದ ನ್ಯಾಯಾಲಯ ಆರೋಪಿ ಪರ ವಕೀಲನ ವಾದವನ್ನು ಎತ್ತಿಹಿಡಿದು ಜಾಮೀನು ನೀಡಿದೆ. ಇನ್ನೊಂದೆಡೆ ಪೊಲೀಸರು ಸಹ ಜಾಮೀನು ರದ್ದು ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದು, ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: ಪಾಕ್ ಬೇಹುಗಾರಿಕೆ ಜಾಲ ಭೇದಿಸಿದ ಮಿಲಿಟರಿ ಇಂಟೆಲಿಜೆನ್ಸ್
ಎರ್ನಾಕುಲಂ ಮೂಲದ ಶಾಲಾ ಬಾಲಕಿಯನ್ನು ಅಪಹರಿಸಿದ್ದ ಸಫಾರ್ ಶಾ ಅತ್ಯಾಚಾರಗೈದು ಕೊಲೆ ಮಾಡಿದ್ದ. ಬಳಿಕ ಆಕೆಯ ಮೃತದೇಹವನ್ನು ತಮಿಳುನಾಡು ಗಡಿ ವಾಲ್ಪರೈನಲ್ಲಿ ಬಿಟ್ಟು ಪರಾರಿಯಾಗಿದ್ದ. ಇದೇ ವರ್ಷ ಜನವರಿ 7ರಂದು ಘಟನೆ ನಡೆದಿತ್ತು. ಜನವರಿ 8ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್)
ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ರು, ಇನ್ನು ಈ ಕಾರ್ಪೊರೇಟರ್ ಯಾವ ಲೆಕ್ಕ?!