ಸಕಲೇಶಪುರ: ಮಹಿಳೆಗೆ ಇಂದು ಎಲ್ಲ ಕ್ಷೇತ್ರದಲ್ಲೂ ಪುರುಷರಷ್ಟೇ ಸಮಾನ ಅವಕಾಶಗಳಿದ್ದು, ಅಡುಗೆ ಮನೆಗೆ ಸೀಮಿತವಾಗುವ ಕಾಲ ಮುಗಿದಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಚೆನ್ನವೇಣಿ ಎಂ. ಶೆಟ್ಟಿ ಹೇಳಿದರು.
ಪಟ್ಟಣದ ನಂಜಮ್ಮ ಮಹಿಳಾ ಸಮಾಜದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಎಂಬ ಕಾರಣಕ್ಕೆ ಮನೆಯಲ್ಲೇ ಉಳಿಯುವ ಕಾಲ ಸರಿದಿದ್ದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕನಸಿನ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಮಹಿಳೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಸಂಕಷ್ಟಗಳಿಗೆ ಎದೆಗುಂದದೆ ಸಮರ್ಥವಾಗಿ ಎದುರಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ಪ್ರತಿಭಾ ಮಂಜುನಾಥ್ ಮಾತನಾಡಿ, ಮಹಿಳೆ ಸ್ವಾವಲಂಬಿಯಾದರೆ ಕುಟುಂಬದ ಏಳಿಗೆಯ ಜತೆಗೆ ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದಾಗಿದೆ ಎಂದರು.
ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು.
ನಂಜಮ್ಮ ಮಹಿಳಾ ಸಂಘದ ಅಧ್ಯಕ್ಷೆ ಕೌಸಲ್ಯಾ ಲಕ್ಷ್ಮಣಗೌಡ, ನಿರ್ಮಲಾ ಪವಿತ್ರನ್, ಸುಪ್ರಿಯಾ ರತನ್, ಶೋಭಾ ಮಂಜುನಾಥ್, ಸವಿತಾ ವಿಷ್ಣುಮೂರ್ತಿ, ರಾಗಿಣಿ ನಾಯ್ಡು, ಲತಾಶೆಟ್ಟಿ, ಜ್ಯೋತಿ ನಂದನ್, ಶಾರದಾ ಗುರುಮೂರ್ತಿ ಇತರರು ಇದ್ದರು.