ಬೆಂಗಳೂರು: ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಟಿ.ಆರ್. ಅಶ್ವತ್ಥ್ ನಾರಾಯಣ್ (90) ನಿಧನರಾದರು.
ಬಾಲನಟನಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಅಶ್ವತ್ಥ್ ನಾರಾಯಣ್, ‘ವಾಲ್ಮೀಕಿ’ ಮೂಲಕ ಚಿತ್ರರಂಗಕ್ಕೆ ನಟನಾಗಿ ಬಂದರು. ತ.ರಾ.ಸು ಅವರ ಕಾದಂಬರಿ ಆಧರಿಸಿ ನಿರ್ಮಾಣವಾದ ಡಾ. ರಾಜಕುಮಾರ್ ಅಭಿನಯದ ‘ಚಂದವಳ್ಳಿಯ ತೋಟ’ ಚಿತ್ರದಲ್ಲಿ, ಅವರು ಸುಬ್ಬಾಭಟ್ಟ ಎಂಬ ನೆಗೆಟಿವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ವೃತ್ತಿಬದುಕಿಗೆ ದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟ ಚಿತ್ರವಾಯಿತು.
ಈ ಚಿತ್ರದ ನಂತರ ಹಲವು ಚಿತ್ರಗಳಲ್ಲಿ, ಅದರಲ್ಲೂ ಡಾ. ರಾಜಕುಮಾರ್ ಅಭಿನಯದ ಹಲವಾರು ಚಿತ್ರಗಳಲ್ಲಿ ಅಶ್ವತ್ಥ್ ನಾರಾಯಣ್ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅದರಲ್ಲೂ ಬಹುತೇಕ ಚಿತ್ರಗಳಲ್ಲಿ ಅವರು ಅರ್ಚಕರಾಗಿ ನಟಿಸಿದ್ದರು. ‘ಬಬ್ರುವಾಹನ’, ‘ಕವಿರತ್ನ ಕಾಳಿದಾಸ’, ‘ದಂಗೆ ಎದ್ದ ಮಕ್ಕಳು’, ‘ತಾಯಿಗೆ ತಕ್ಕ ಮಗ’, ‘ಅನುರಾಗ ಅರಳಿತು’, “ಪ್ರೊಫೆಸರ್ ಹುಚ್ಚೂರಾಯ’, ‘ಕಾಮನ ಬಿಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ನಾಲ್ಕು ತಲೆಮಾರಿನ ಕಲಾವಿದರ ಜತೆಗೆ ನಟಿಸಿದ ಹೆಗ್ಗಳಿಕೆ ಅಶ್ವತ್ಥ್ ನಾರಾಯಣ್ ಅವರಿಗಿದೆ. ಡಾ. ರಾಜ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಜತೆಗೂ ನಟಿಸಿದ್ದ ಅವರು, ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ಅಭಿನಯದ ‘ಸಿದ್ಧಾರ್ಥ’ ಚಿತ್ರದಲ್ಲೂ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರವಿದ್ದರು.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅಶ್ವತ್ಥ್ ನಾರಾಯಣ್ ಅವರು ಭಾನುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಮೂವರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ನನ್ನ ಹುಟ್ಟೂರು ಧಾರವಾಡ, ಪ್ಲೀಸ್ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್ ಪ್ರಜೆ
ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?