ಬೆಂಗಳೂರು: ರಾಜಧಾನಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ, ಚರಂಡಿ ಹಾಗೂ ಒಳ ಚರಂಡಿ ಜಾಲ ಸಮಗ್ರ ಸುಧಾರಣೆಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುವ ಚಿಂತನೆಯಿದ್ದು, ಇದಕ್ಕಾಗಿ ಶೀಘ್ರವೇ ಜಂಟಿ ವಿಶೇಷ ಸಭೆ ಕರೆಯಲು ನಿರ್ಧರಿಸಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಹಾನಿಗೊಳಗಾದ ಪ್ರದೇಶ, ಕೊಳಚೆ ನೀರು ಶುದ್ಧೀಕರಣ ಘಟಕ ಹಾಗೂ ಮುಖ್ಯ ಚರಂಡಿ ನಿರ್ಮಾಣ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.
ಎಚ್ಎಸ್ಆರ್ ಲೇಔಟ್ ಮಾತ್ರವಲ್ಲ ಹಲವಾರು ಬಡಾವಣೆಗಳಲ್ಲಿ ಇಂತಹ ಸಮಸ್ಯೆಗಳಿವೆ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ, ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಭೆ ಕರೆದು ಚರ್ಚಿಸಿ, ಮಾಸ್ಟರ್ ಪ್ಲ್ಯಾನ್ ರೂಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಎಂದರು.
ಕೆಲವು ಬಡಾವಣೆಗಳಲ್ಲಿ ಚರಂಡಿಗಳು ಏರುಪೇರಾಗಿದ್ದು, ಲೋಪ ಸರಿಪಡಿಸಿ ಸಮತಟ್ಟುಗೊಳಿಸಲು ಸೂಚಿಸಲಾಗಿದೆ. ಮುಖ್ಯ ಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು, ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದಕ್ಕೆ ತಿಳಿಸಿದರು.
ಅಚ್ಚರಿ: ಅಗ್ರಂ ಕೊಳಚೆ ನೀರು ಶುದ್ಧೀಕರಣ ಘಟಕದ ಸಾಮರ್ಥ್ಯ 35 ಎಂಎಲ್ಡಿ ಇದ್ದರೂ 20-25 ಎಂಎಲ್ಡಿ ನೀರು ಶುದ್ಧೀಕರಿಸಲಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಶುದ್ಧೀಕರಿಸಿ ಮತ್ತೆ ಚರಂಡಿಗೆ ಹರಿಸಲಾಗುತ್ತಿದೆ. ಪೂರ್ಣ ಸಾಮರ್ಥ್ಯದಲ್ಲಿ ಶುದ್ಧೀಕರಣ ಮಾಡಬೇಕು. ಶುದ್ಧೀಕರಿಸಿದ ನೀರು ಸಮೀಪದ ಕೆರೆಗಳಿಗೆ ತುಂಬಬೇಕು ಅಧಿಕಾರಿಗಳಿಗೆ ತಾಕೀತು ಮಾಡಿರುವೆ. ಮಡಿವಾಳದ ನಾಲ್ಕು ಎಂಎಲ್ ಡಿ ಟ್ರೀಟ್ಮೆಂಟ್ ಪ್ಕ್ಯಾಂಟ್ ಶೀಘ್ರ ಕಾರ್ಯಾರಂಭಿಸಲು ಸೂಚಿಸಲಾಗಿದೆ.
ರಸ್ತೆ ಗುಂಡಿಗೆ ಶೀಘ್ರ ಮೋಕ್ಷ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ವಿಖಂಬವಾಗಿದೆ. ಮಳೆ ನಿಂತ ತಕ್ಷಣ ಯುದ್ಧೋಪಾದಿಯಲ್ಲಿ ರಿಪೇರಿ ಕಾಮಗಾರಿ ಕೈಗೆತ್ತಿಕೊಂಡು ಗುಂಡಿಗೆ ಮೋಕ್ಷ ನೀಡಲಾಗುವುದು. ಹಾಗೆಯೇ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.