ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ಗೆ ಪರ್ಯಾಯ ನಾಯಕನನ್ನು ಜೆಡಿಎಸ್ ವರಿಷ್ಠರು ಹುಟ್ಟುಹಾಕಿದ್ದು, ಇದರ ಪ್ರಾರಂಭಿಕ ಹಂತವಾಗಿ ಇಂದು(ಸೋಮವಾರ) ಗುಬ್ಬಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಸಮಾವೇಶಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಜನಸಾಗರ ಹರಿದುಬಂದಿತ್ತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಒಡನಾಟ ಇಟ್ಟುಕೊಂಡಿರುವುದಕ್ಕೆ ಕೆಂಡಾಮಂಡಲವಾಗಿರುವ ದಳಪತಿಗಳು ಶಾಸಕ ಸ್ಥಾನ ಮುಗಿಯುವ ಮೊದಲೇ ಎಸ್.ಆರ್.ಶ್ರೀನಿವಾಸ್ ಹಾಗೂ ಬೆಮೆಲ್ ಕಾಂತರಾಜು ಅವರನ್ನು ದೂರವಿಟ್ಟು ಇವತ್ತಿನ ಬೃಹತ್ ಸಮಾವೇಶ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಗುಬ್ಬಿ ಜೆಡಿಎಸ್ ಸಮಾವೇಶಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಚನ್ನಬಸವೇಶ್ವರ ದೇವಾಲಯ ಆವರಣದಿಂದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. 500 ಕೆಜಿ ಸೇಬಿನ ಹಾರ ಹಾಗೂ ಪುಷ್ಪಾಗಳನ್ನು ಹಾಕುವ ಮೂಲಕ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಮಾಡಲಾಯಿತು.
ಗುಬ್ಬಿ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಲೆಂದು ತುಮಕೂರು ವಿವಿ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಜಿಪಂ ಮಾಜಿ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗುಬ್ಬಿ ಸಮಾವೇಶದಿಂದ ದೂರ ಉಳಿದರು.
ಶಾಸಕ ಶ್ರೀನಿವಾಸ್ಗೆ ಬಾಗಿಲು ಮುಚ್ಚಿದ ಜೆಡಿಎಸ್! ಕಾಂಗ್ರೆಸ್ ಜತೆಗಿನ ಹೊಂದಾಣಿಕೆ ಸುಲಭವಲ್ಲ