ಮೈಸೂರು: ಮನೆ ಬಳಿ ತರಕಾರಿ ತ್ಯಾಜ್ಯ ಸುರಿಯುತ್ತಿದ್ದ ವಿಷಯವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಒಬ್ಬಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೃಷ್ಣರಾಜನರಸಿಂಹಪುರ(ಕೆಎನ್ ಪುರ) ಬಡಾವಣೆಯಲ್ಲಿ ಸಂಭವಿಸಿದೆ. ಮತ್ತೊಬ್ಬ ಮಹಿಳೆ ಸ್ಥಿತಿ ಗಂಭೀರವಾಗಿದೆ.
ಕೃಷ್ಣರಾಜನರಸಿಂಹಪುರದ ವಿಜಯ್ಕುಮಾರ್ ಅವರ ಪತ್ನಿ ಸುನೀತಾ(35) ಕೊಲೆಯಾಗಿದ್ದು, ತಾಯಿ ಭಾರತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಬಡಾವಣೆಯ ಗಿರೀಶ್ ಕೊಲೆ ಆರೋಪಿಯಾಗಿದ್ದು, ಈತ ಹಾಗೂ ಇದಕ್ಕೆ ಸಹಕಾರ ನೀಡಿದ ಶಿವರಾಜ್ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ವಿಜಯ್ಕುಮಾರ್ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಮಾಡಿ ಉಳಿದ ತರಕಾರಿ ತ್ಯಾಜ್ಯವನ್ನು ಗಿರೀಶ್ ಮನೆ ಬಳಿಯ ರಸ್ತೆಬದಿ ಸುರಿಯುತ್ತಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಬಹಳ ಹಿಂದಿನಿಂದಲೂ ವಿಜಯ್ಕುಮಾರ್ ಹಾಗೂ ಗಿರೀಶ್ ಕುಟುಂಬದ ನಡುವೆ ಆಗಾಗ್ಗೆ ಜಗಳ ನಡೆದು ಕೆಲವರು ಸಂಧಾನ ನಡೆಸಿದ್ದರು. ಇದೇ ವಿಷಯವಾಗಿ ಬುಧವಾರ ರಾತ್ರಿಯೂ ವಿಜಯ್ಕುಮಾರ್ ಪತ್ನಿ ಸುನೀತಾ, ಗಿರೀಶ್ ಕುಟುಂಬದ ನಡುವೆ ಜಗಳ ಆರಂಭಗೊಂಡಿತು.
ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಗಿರೀಶ್ ಮಾರಕಾಸ್ತ್ರದಿಂದ ಸುನೀತಾ ಅವರ ಮೇಲೆ ಹಲ್ಲೆ ಮಾಡಿದ. ಇದನ್ನು ನೋಡಿದ ಭಾರತಿ ಅವರು ಓಡಿ ಬಂದು ಗಿರೀಶ್ನನ್ನು ತಡೆಯಲು ಯತ್ನಿಸಿದಾಗ ಆಕೆ ಮೇಲೂ ಹಲ್ಲೆ ನಡೆಸಿದ. ಇದಕ್ಕೆ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಶಿವರಾಜ್ ಸಹಕಾರ ನೀಡಿದ್ದ ಎನ್ನಲಾಗಿದೆ. ತೀವ್ರ ಹಲ್ಲೆಯಿಂದ ಸುನೀತಾ ಸ್ಥಳದಲ್ಲಿಯೇ ಮೃತಪಟ್ಟರೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
10 ವರ್ಷದ ಹಿಂದೆ ವಿಜಯ್ಕುಮಾರ್ ಅವರನ್ನು ಮದುವೆಯಾಗಿದ್ದ ಸುನೀತಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ
ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ