ಶಿವಮೊಗ್ಗ: ರೈತ ಕಣ್ಮುಚ್ಚಿ ಕುಳಿತರೆ ಇಡೀ ಭೂಮಿ ನಶಿಸಿ ಹೋಗುತ್ತದೆ. ಅದೇ ರೈತ ಕಣ್ತೆರೆದರೆ ಇಡೀ ದೇಶವೇ ಎಚ್ಚರಗೊಳ್ಳುತ್ತದೆ. ರೈತ ಪ್ರಸ್ತುತ ಆಧುನಿಕ ಮಾರುಕಟ್ಟೆ ವಿರುದ್ಧ ಮುನಿಸಿಕೊಂಡು ಹಳೇ ಕೃಷಿ ಪದ್ಧತಿ ಮುಂದುವರಿಸಿದ್ದೇ ಆದಲ್ಲಿ ಎಲ್ಲರೂ ಕೃಷಿಕರೆದುರು ಮಂಡಿಯೂರುತ್ತಾರೆ ಎಂದು ಚಿತ್ರದುರ್ಗ ಜಿಲ್ಲೆಯ ಪ್ರಗತಿಪರ ರೈತ, ರಾಜ್ಯಪ್ರಶಸ್ತಿ ಪುರಸ್ಕೃತ ಕೆ.ಆರ್.ಜ್ಞಾನೇಶ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ರೈತ ದಸರಾ ಸಮಿತಿ, ಶಿಮುಲ್, ಕೃಷಿ ಇಲಾಖೆ ಸಹಕಾರದಲ್ಲಿ ಬುಧವಾರ ರೈತ ದಸರಾ ಉದ್ಘಾಟಿಸಿ ಮಾತನಾಡಿ, ರೈತರು ಸ್ವಾವಲಂಬಿಗಳಾಗಬೇಕು. ರಾಸಾಯನಿಕ ಔಷಧ ಕಡಿಮೆ ಮಾಡಿ ಬೆಳೆಗಳನ್ನು ಸಾಧ್ಯವಾದಷ್ಟು ಮುಂದಿನ ವರ್ಷದವರೆಗೆ ಸಂಗ್ರಹಿಸಿಟ್ಟುಕೊಳ್ಳಬೇಕು. ಆಗ ಮಾತ್ರ ರೈತರ ಬದುಕು ಬರದಂತಹ ಸಂಕಷ್ಟದಿಂದ ಪಾರಾಗಲಿದೆ ಎಂದರು.
ಎಲ್ಲರಂತೆ ರೈತರೂ ಹಣದ ಹಿಂದೆ ಓಡಲು ಆರಂಭಿಸಿದ್ದಾರೆ. ಪ್ರದೇಶವಾರು ಬೆಳೆಗಳನ್ನು ಕೈಬಿಟ್ಟು ಅಡಕೆ ಸೇರಿದಂತೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಯಂತ್ರಗಳು ಬಂದ ಬಳಿಕ ಬೆಳೆಗಳ ರಾಶಿ ಅಥವಾ ಕಣ ಪೂಜೆ ಮರೆತೇ ಹೋಗಿದೆ. ತಾವೇ ಬೆಳೆದ ಬೆಳೆಗಳ ಬೀಜ ಬಿಟ್ಟು ಹೊಸ ತಳಿಯ ಬಿತ್ತನೆ ಬೀಜಗಳನ್ನು ಖರೀದಿ ಮಾಡುತ್ತಿರುವುದೇ ಕೃಷಿಕರು ಮಾಡುತ್ತಿರುವ ದೊಡ್ಡ ಪ್ರಮಾದವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಆಹಾರ ದಸರಾ ಸಮಿತಿ ಸದಸ್ಯ ಎಚ್.ಸಿ.ಯೋಗೇಶ್ ಪ್ರಸ್ತಾವಿಕ ಮಾತನಾಡಿದರು. ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ್, ಆಹಾರ ದಸರಾ ಸಮಿತಿ ಅಧ್ಯಕ್ಷೆ ಮೆಹಕ್ ಷರ್ೀ, ಉತ್ಸವ ಸಮಿತಿ ಅಧ್ಯಕ್ಷ ಯು.ಎಚ್.ವಿಶ್ವನಾಥ್, ಸದಸ್ಯರಾದ ಸುನೀತಾ ಅಣ್ಣಪ್ಪ, ನಾಗರಾಜ ಕಂಕಾರಿ, ಧೀರರಾಜ್ ಹೊನ್ನವಿಲೆ, ಇ.ವಿಶ್ವಾಸ್, ಅನಿತಾ ರವಿಶಂಕರ್, ಆರ್.ಸಿ.ನಾಯ್ಕ, ಮಂಜುನಾಥ, ಪಿ.ಪ್ರಭಾಕರ್ ಇದ್ದರು.