ಬೆಂಗಳೂರು: ದಾಸರಹಳ್ಳಿಯ ದಿವ್ಯಾಂಜಲಿ ತನಗೆ ಅಂಗವಿಕಲೆ ಕೋಟಾ ಅಡಿ ಸೂರು ಒದಗಿಸುವಂತೆ ಕೋರಿಕೆ ಇತ್ತರು. ಆದರೆ, ಆಕೆಗೆ ಫ್ಲ್ಯಾಟ್ ಜತೆಗೆ ಪಾಲಿಕೆಯಲ್ಲಿ ಉದ್ಯೋಗವನ್ನೂ ಮಂಜೂರು ಮಾಡಲು ಡಿಸಿಎಂ ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿ ಅಚ್ಚರಿ ಮೂಡಿಸಿದರು.
ಯಲಹಂಕದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸ್ಪಂದನಾ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಂಗವಿಕಲೆ ಮಹಿಳೆಯೊಬ್ಬರು ಅಹವಾಲು ಸಲ್ಲಿಸಿ ತನಗೆ ಸೂರು ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಆಕೆಯ ಕೌಟುಂಬ ಆರ್ಥಿಕವಾಗಿ ಸಶಕ್ತವಾಗಿರದ ಮಾಹಿತಿ ಪಡೆದು ಮಹಿಳೆಗೆ ಸಾಂತ್ವನ ಹೇಳಿದರು.
ಕೂಡಲೇ ಬಿಡಿಎ ಆಯುಕ್ತರನ್ನು ಕರೆದು ಈಕೆಗೆ ಅಂಗವಿಕಲೆ ಕೋಟಾ ಅಡಿಯಲ್ಲಿ ಫ್ಲ್ಯಾಟ್ ಮಂಜೂರು ಮಾಡಿರೆಂದು ಸೂಚಿಸಿದರು. ಜತೆಗೆ ತಾನು ಬಿ.ಎ ಪದವೀಧರೆ ಎಂದಿದ್ದಕ್ಕೆ ಕೆಲಸ ಮಾಡಲು ಶಕ್ತಲಾಗಿದ್ದರೆ ಕೆಲಸ ಕೊಡಿಸುವೆ ಎಂದು ಹೇಳಿ ಪಾಲಿಕೆ ಮುಖ್ಯ ಆಯುಕ್ತರನ್ನು ಕರೆಸಿ ಅಂಗವಿಕಲೆ ಮಾಡುವ ಉದ್ಯೋಗ ಕೊಡುವಂತೆ ಸೂಚಿಸಿದರು.
ಇದೇ ರೀತಿ ಹೆಬ್ಬಾಳ ಅಮಾನಿಕೆರೆ ನಿವಾಸಿ ರಾಮಚಂದ್ರ ಅವರು ತನ್ನ 450 ಜಾಗಕ್ಕೆ ಪಾಲಿಕೆಯವರು 1.90 ಲಕ್ಷ ರೂ. ತೆರಿಗೆ ಹಾಕಿ ಅನ್ಯಾಯ ಮಾಡಿದ್ದಾರೆಂದು ದೂರಿದರು. ಇಷ್ಟು ದೊಡ್ಡ ಮೊತ್ತ ಬರಲು ಸಾಧ್ಯವಿಲ್ಲ ಎಂದು ಸಮಾಧಾನ ಹೇಳಿ, ಪಾಲಿಕೆ ಆಯುಕ್ತರಿಗೆ ಅರ್ಜಿ ಹಸ್ತಾಂತರಿಸಿ ತೆರಿಗೆ ಮೊತ್ತ ಪರಿಷ್ಕರಿಸುವಂತೆ ಸೂಚಿಸಿದರು.
ಹಲವು ಮಂದಿ ತಮಗೆ ಗೃಹಲಕ್ಷ್ಮೀ ಯೋಜನೆಯಿಂದ ಹಣ ಬಂದಿಲ್ಲ. ಒಂದು ತಿಂಗಳು ಬಂದ ಬಳಿಕ ಇನ್ನುಳಿದ ತಿಂಗಳಿಗೆ ಬಂದಿಲ್ಲ. ರೇಷನ್ ಕಾರ್ಡ್ಗೆ ಅರ್ಜಿ ಹಾಕಿದರೂ ವಿತರಣೆಯಾಗುತ್ತಿಲ್ಲ. ಪಾಲಿಕೆಯಿಂದ ಸಾಲಸೌಲಭ್ಯದ ಯೋಜನೆ ಒದಗಿಸುತ್ತಿಲ್ಲ. ಖಾತೆ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಡಿಸಿಎಂ ಗಮನಕ್ಕೆ ತಂದರು. ಅರ್ಜಿ ನೀಡಿದರೂ ಅದಕ್ಕೆ ಹಿಂಬರಹ ನೀಡಲು ಗಂಟೆಗಟ್ಟಲೇ ಕಾಯಿಸಲಾಗುತ್ತಿದೆ ಎಂಬ ದೂರು ಹಲವರಿಂದ ಕೇಳಿಬಂತು.