ದಾವಣಗೆರೆ: ಆಕೆ ಹುಟ್ಟಿನಿಂದ ಅಂಗವಿಕಲೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ದಟ್ಟವಾಗಿದೆ. ಆದರೆ, ದೈಹಿಕ ನ್ಯೂನತೆ ಅಡ್ಡಿಯಾಗುತ್ತಿದೆ. ಒಮ್ಮೆಯಾದರೂ ಖಾಕಿ ಉಡುಪಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಆಕೆಯ ಮಹದಾಸೆಯನ್ನು ಪೊಲೀಸ್ ಇಲಾಖೆ ಈಡೇರಿಸಿದ್ದು, ಖಾಕಿ ತೊಟ್ಟ ಆಕೆಯ ಸಂತೋಷಕ್ಕೆ ಪಾರವೇ ಇಲ್ಲ.
ಇಂತಹ ಅಪರೂಪದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ನ್ಯಾಯಾಲಯದ ಬಳಿ ಕಂಪ್ಯೂಟರ್ ಟೈಪಿಂಗ್ ಅಂಗಡಿ ಇಟ್ಟುಕೊಂಡಿರುವ, ದಾವಣಗೆರೆಯ ಕೆಟಿಜೆ ನಗರ ನಿವಾಸಿ ವಿಜಯಲಕ್ಷ್ಮೀ ಎಂಬುವರ ಪುತ್ರಿ 18 ವರ್ಷದ ಸಾಧನಾ ಮಿದುಳು ವಾತ (ಸೆರೆಬ್ರಲ್ ಪಾಲಿಸಿ)ದಿಂದ ಬಳಲುತ್ತಿದ್ದು, ಆಕೆಯ ಸಹೋದರಿಗೂ ಅಂಗವೈಕಲ್ಯವಿದೆ.
ಓದಿನಲ್ಲಿ ಚುರುಕಾಗಿರುವ ಸಾಧನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಗಳಿಸಿದ್ದಾಳೆ. ಈಕೆಯ ತಾಯಿ ಜಿಲ್ಲಾ ನ್ಯಾಯಾಲಯದ ಬಳಿ ಕಂಪ್ಯೂಟರ್ ಟೈಪಿಂಗ್ ಅಂಗಡಿ ಇಟ್ಟುಕೊಂಡಿದ್ದಾರೆ. ಸಾಧನಾಗೆ ಬಾಲ್ಯದಿಂದಲೂ ‘ಎಸ್ಪಿ’ ಆಗಬೇಕು ಎಂಬ ಕನಸಿತ್ತು. ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಿಲ್ಲ. ಆದರೆ, ಮಗಳನ್ನು ಪೊಲೀಸ್ ಅಧಿಕಾರಿಯ ವೇಷದಲ್ಲಿ ನೋಡಬೇಕು ಎಂಬ ಅಪೇಕ್ಷೆಯಿಂದ ವಿಜಯಲಕ್ಷ್ಮೀ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬಳಿ 1 ವರ್ಷದ ಹಿಂದೆ ಮನವಿ ಮಾಡಿದ್ದರಂತೆ.
ತಾಯಿ-ಮಗಳ ಕನಸಿಗೆ ಗುರುವಾರ ಕಾಲ ಕೂಡಿ ಬಂದಿತ್ತು. ಪೊಲೀಸ್ ಉಡುಪಿನಲ್ಲಿದ್ದ ಸಾಧನಾಳಿಗೆ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಅವರ ಪಕ್ಕದಲ್ಲಿ 45 ನಿಮಿಷ ಕಾಲ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ಯುವತಿ ಧರಿಸಿದ್ದ ಖಾಕಿ ಸಮವಸ್ತ್ರದಲ್ಲಿ “ಸಾಧನಾ ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾವಣಗೆರೆ’ ಎಂದು ಬರೆದ ನೇಮ್ ಪ್ಲೇಟ್ ಅನ್ನೂ ಹಾಕಲಾಗಿತ್ತು. ಈ ದೃಶ್ಯವನ್ನು ತಾಯಿ ವಿಜಯಲಕ್ಷ್ಮೀ ಮತ್ತು ಸ್ನೇಹಿತರು, ಹಿತೈಷಿಗಳು ಕಣ್ತುಂಬಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದ್ದರು.
ರ್ಯಾಂಪ್, ಗಾಲಿ ಕುರ್ಚಿ ಸೌಲಭ್ಯ ಕಲ್ಪಿಸಿ: ಸಮವಸ್ತ್ರದಲ್ಲಿದ್ದ ಸಾಧನಾಳನ್ನು ಪೊಲೀಸ್ ಅಧಿಕಾರಿಗಳು ಮಾತನಾಡಿಸಿದಾಗ, ಸಂಜ್ಞಾ ಭಾಷೆಯಲ್ಲಿ ಉತ್ತರಿಸಿ, ಎಸ್ಪಿ ಕಚೇರಿಯಲ್ಲಿ ಅಂಗವಿಕಲರಿಗಾಗಿ ರ್ಯಾಂಪ್ ಮಾಡಬೇಕು, ಗಾಲಿ ಕುರ್ಚಿಯ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದಳು. ಅಲ್ಲದೆ ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು. ದೂರುಗಳನ್ನು ಬೇಗನೆ ಸ್ವೀಕರಿಸಬೇಕು. ದೇವಸ್ಥಾನ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲೂ ರ್ಯಾಂಪ್, ಗಾಲಿ ಕುರ್ಚಿ ಇರಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದಳು.
ನನ್ನ ಮಗಳನ್ನು ಪೊಲೀಸ್ ಸಮವಸ್ತ್ರದಲ್ಲಿ ನೋಡಿ ಬಹಳ ಸಂತೋಷವಾಯಿತು. ಐಜಿಪಿ ಅವರು ತಮ್ಮ ಜತೆಗೆ ಕುಳಿತುಕೊಳ್ಳಲು ಆಕೆಗೆ ಅವಕಾಶ ಮಾಡಿಕೊಟ್ಟಿದ್ದು ಸ್ಮರಣೀಯ. ಮಗಳಿಗೂ ಅಷ್ಟೇ ಖುಷಿಯಾಗಿದೆ. ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.
|ವಿಜಯಲಕ್ಷ್ಮೀ ಸಾಧನಾಳ ತಾಯಿ
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ
ನಡುರಸ್ತೆಯಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ, ಬೆಚ್ಚಿಬಿದ್ದ ಶಿವಮೊಗ್ಗ ಜನತೆ! ಈತ ಲವ-ಕುಶ ಕೊಲೆಯ ಪ್ರಮುಖ ಆರೋಪಿ
ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ